ರಾಮನಗರ ಜೈಲಿಗೆ ಸ್ವಾಮಿ ನಿತ್ಯಾನಂದ
ರಾಮನಗರ, ಏ. 30 : ಲೈಂಗಿಕ ಹಗರಣದಲ್ಲಿ ಸಿಲುಕಿರುವ ವಿವಾದಾತ್ಮಕ ಸ್ವಾಮೀಜಿ ನಿತ್ಯಾನಂದನನ್ನು ಮೇ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ರಾಮನಗರ ಜಿಲ್ಲಾ ಕಾರಾಗೃಹದಲ್ಲಿಡಲಾಗಿದೆ.
ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ನೀಡಬೇಕೆಂಬ ಸರಕಾರಿ ವಕೀಲರ ಬೇಡಿಕೆಯನ್ನು ಪುರಸ್ಕರಿಸದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ನಾರಾಯಣ್ ಪ್ರಸಾದ್ ಅವರು ನಿತ್ಯಾನಂದನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ನಟಿ ರಂಜಿತಾ ಜೊತೆ ವಿಡಿಯೋದಲ್ಲಿ ಸೆರೆಸಿಕ್ಕ ನಂತರ ತಲೆಮರೆಸಿಕೊಂಡಿದ್ದ ನಿತ್ಯಾನಂದ ಹಿಮಾಚಲ ಪ್ರದೇಶದಲ್ಲಿ ಬಂಧಿತನಾದ ನಂತರ ಕಳೆದ ಹತ್ತು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ.
ಹೃದಯಬೇನೆ ಮತ್ತು ಪುರಷತ್ವವಿಲ್ಲವೆಂದು ನಾಟಕ ಮಾಡಿ ನಿತ್ಯಾನಂದ ಸಿಐಡಿ ಪೊಲೀಸರಿಗೆ ತನಿಖೆಗೆ ಸಮರ್ಪಕವಾಗಿ ಸ್ಪಂದಿಸದೇ ಸುಸ್ತು ಮಾಡಿದ್ದ. ಈಗಾಗಲೇ ಮೂರು ಸಾರಿ ರಾಮನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲದಲ್ಲಿ ಕೈಕಟ್ಟಿ ನಿಂತಿದ್ದ ನಿತ್ಯಾನಂದನಿಗೆ ಜಾಮೀನು ನೀಡದೇ ಪೊಲೀಸ್ ಕಸ್ಟಡಿಗೆ ನೀಡಿದ್ದರು. ಆಶ್ರಮದಲ್ಲಿ ನಿತ್ಯಾನಂದನೊಡನೆ ಹಾಸಿಗೆ ಹಂಚಿಕೊಂಡಿದ್ದು ನಾನಲ್ಲ ಎಂದು ರಂಜಿತಾ ಹೇಳಿದ್ದರಿಂದ ಪ್ರಕರಣ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. ಆದರೆ, ಲೈಂಗಿಕ ವಿಡಿಯೋದಲ್ಲಿ ಇದ್ದದ್ದು ನಿತ್ಯಾನಂದ ಮತ್ತು ರಂಜಿತಾರೇ ಎಂದು ಹೈದರಾಬಾದ್ ನ ವಿಧಿವಿಜ್ಞಾನ ಸಂಸ್ಥೆ ದೃಢಪಡಿಸಿದೆ.
ಈ ನಡುವೆ ಬಿಡದಿಯ ನಿತ್ಯಾನಂದ ಧ್ಯಾನಪೀಠದಲ್ಲಿ ಅಕ್ರಮವಾಗಿ ಗಂಧದ ತುಂಡು ದಾಸ್ತಾನು ಸಂಗ್ರಹಿಸಿದ್ದನೆಂದು ದಾಖಲಿಸಲಾದ ಪ್ರಕರಣದಲ್ಲಿ ನಿತ್ಯಾನಂದನಿಗೆ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶೆ ವಿಜಯಲಕ್ಷ್ಮಿಯವರು ಜಾಮೀನು ನೀಡಿದ್ದಾರೆ.
ಎಂದಿನಂತೆ ಖಾಕಿ ಬೆಂಗಾವಲಿನಲ್ಲಿ ಅಂಬಾಸಿಡರ್ ಕಾರಿನಲ್ಲಿ ಬಂದ ನಿತ್ಯಾನಂದ ಹಸನ್ಮುಖಿಯಾಗಿಯೇ ಕೋರ್ಟ್ ಪ್ರವೇಶ ಮಾಡಿದ. ಸುಮಾರು 30 ನಿಮಿಷಗಳ ಕಾಲ ನಿತ್ಯಾನಂದ ಕೋರ್ಟ್ನಲ್ಲಿ ವಿಚಾರಣೆ ಸಂದರ್ಭದಲ್ಲಿ ರುದ್ರಾಕ್ಷಿ ಮಣಿ ಮಾಲೆ ಹಿಡಿದು ಜಪ ಮಾಡುತ್ತಲೇ ಇದ್ದ. ಜೈಲಿಗೆ ಕಳಿಸುವ ಆದೇಶ ಬಂದು ಕೋರ್ಟಿನಿಂದ ಹೊರಬಂದನಂತರವೂ ಹಸನ್ಮುಖಿಯಾಗೇ ಇದ್ದ. ಮುಂದಿನ ವಿಚಾರಣೆ ಮೇ 12ರಂದು ನಡೆಯಲಿದೆ ಎಂದು ಸರ್ಕಾರಿ ಅಭಿಯೋಜಕ ಲೋಕೇಶ್ ಸುದ್ದಿಗಾರರಿಗೆ ತಿಳಿಸಿದರು.
ನಿಲುವಂಗಿ ನಿತ್ಯಾನಂದನಿಗೆ ಜೈಲಿನಲ್ಲೂ ವೈದ್ಯರ ಸಲಹೆ ಮೇರೆಗೆ ಆಹಾರ ನೀಡುವಂತೆ ಹೇಳಲಾಗಿದೆ. ಯಾವುದೇ ಕಾರಣಕ್ಕೂ ವಿಶೇಷ ಉಪಚಾರ ನೀಡದಂತೆ ಹಾಗೂ ಧ್ಯಾನ, ಪ್ರಾರ್ಥನೆ ಮಾಡಲು ಅವಕಾಶ ನೀಡುವಂತೆ ನ್ಯಾಯಾಧೀಶರು ಆದೇಶಿಸಿದರು.
ನಿತ್ಯಾನಂದ ಪೊಲೀಸ್ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಆದೇಶ ಹೊರಬರುತ್ತಿದ್ದಂತೆ ಹಸನ್ಮುಖಿಯಾಗಿಯೇ ಹೊರಬಂದ ನಿತ್ಯಾನಂದ ಸರ್ಕಾರಿ ಅಭಿಯೋಜಕ ಲೋಕೇಶ್ರವರ ಕೈಮುಟ್ಟಿ ನಮಸ್ಕರಿಸಿದ. ನಿತ್ಯಾನಂದ ಇರುವ ಜೈಲಿನ ಸುತ್ತ ಪೊಲೀಸರ ಸರ್ಪಗಾವಲು ಹಾಕಲಾಗಿದೆ.












Click it and Unblock the Notifications