ಗೋಹತ್ಯೆ ನಿಷೇಧ ಬಿಜೆಪಿ ಗೆಲುವಿನ ಮಂತ್ರ!

ಈ ಬಗೆಯ ಪ್ರಚೋದನಾತ್ಮಕ ಹೇಳಿಕೆ ನೀಡುವುದರ ಮುಖಾಂತರ ಬಿಜೆಪಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ. ಗೋಹತ್ಯೆಯಂಥ ಸೂಕ್ಷ್ಮ ವಿಷಯವನ್ನು ರಾಜಕೀಯ ದಾಳವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಕೆಂಡ ಕಾರಿದೆ.
ಮಂಡ್ಯದಲ್ಲಿ ಬಜೆಪಿ ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಈ ವಿಷಯವನ್ನು ಶನಿವಾರ ಘಂಟಾಘೋಷವಾಗಿ ಸಾರಿರುವ ಈಶ್ವರಪ್ಪ ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಬಿಎಂಪಿ ಪ್ರಣಾಳಿಕೆಯಲ್ಲಿ ನಮೂದಿಸಲಾಗಿದ್ದ ಇತರ ವಿಷಯಗಳನ್ನು ಬದಿಗಿಟ್ಟು ಗೋಹತ್ಯೆ ನಿಷೇಧವನ್ನು ಪ್ರಸ್ತಾಪಿಸುತ್ತಿರುವುದು ತಿಕ್ಕಾಟಕ್ಕೆ ಕಾರಣವಾಗಿದೆ.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಗೋಹತ್ಯೆ ನಿಷೇಧ ಮಾಡಿದ್ದೇ ಕಾರಣ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿಯೂ ಇದನ್ನೇ ಗೆಲುವಿನ ಮಂತ್ರವಾಗಿ ಪ್ರಯೋಗಿಸಲಾಗುವುದು ಎಂದು ಮಂಡ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಈಶ್ವರಪ್ಪ ಹೇಳಿದ್ದಾರೆ.
ಗೋವು ನಮ್ಮ ತಾಯಿಯಿದ್ದ ಹಾಗೆ. ಆದರೆ, ಗೋಹತ್ಯೆ ರಾಜ್ಯದಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ನಡೆಯುತ್ತಿದೆ. ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯಲ್ಲಿ ಗೋಹತ್ಯೆ ನಿಷೇಧ ಮಾಡುವುದಾಗಿ ಹೇಳಿದ್ವಿ. ಹೇಳಿದ ರೀತಿಯಲ್ಲೇ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಮಾಡಲಾಗಿದೆ. ಇದನ್ನೇ ಗ್ರಾಮ ಪಂಚಾಯತಿ ಚುನಾವಣೆಯಲ್ಲೂ ಬಳಸುತ್ತೇವೆ ಎಂದು ಈಶ್ವರಪ್ಪ ನುಡಿದಿದ್ದಾರೆ.
ಬಿಕೆ ಹರಿಪ್ರಸಾದ್ ಕಿಡಿ : ಈ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿಕೆ ಹರಿಪ್ರಸಾದ್, ಈಶ್ವರಪ್ಪ ಅಂಥವರು ವಿಧಾನಸಭೆಯಲ್ಲಿ ಇರಬಾರದು. ಅವರನ್ನು ಜೈಲಿಗೆ ಕಳುಹಿಸಬೇಕು ಎಂದಿದ್ದಾರೆ.
ಗೋಹತ್ಯೆ ಮಾಡಬೇಕೆಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಈ ರೀತಿಯ ಹೇಳಿಕೆ ನೀಡುವುದರ ಮುಖಾಂತರ ಬಿಜೆಪಿ ಜಾತಿ ರಾಜಕಾರಣವನ್ನು ಮಾಡುತ್ತಿದೆ. ಗೋಹತ್ಯೆ ನಿಷೇಧ ಮಾಡಿ ಬಿಜೆಪಿ ಬಡವರ ಅನ್ನವನ್ನು ಕಿತ್ತುಕೊಂಡಿದೆ. ಗೋವನ್ನು ರಾಜಕೀಯ ವಸ್ತುವಾಗಿ ಮಾಡಿಕೊಂಡಿರುವುದು ನಿಜಕ್ಕೂ ವಿಷಾದನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.











Click it and Unblock the Notifications