ಯುವಕನ ಗಾಂಧಿಗಿರಿಗೆ ಬೆಚ್ಚಿದ ಸವಣೂರ ಪುರಸಭೆ
ತನ್ನ ಮನೆಯ ದಾಖಲೆಗಳ ಖಾತಾ ಬದಲಾವಣೆಗಾಗಿ ಕಳೆದ ಒಂದು ವರ್ಷದಿಂದ ಪುರಸಭೆಯ ಕಂಬ ಸುತ್ತಿದ ವಿರೂಪಾಕ್ಷಪ್ಪ ಮಹಾದೇವಪ್ಪ ನವಲಗುಂದ ಎಂಬ ಹಳ್ಳಿ ಹೈದ ಕೊನೆಯ ಅಸ್ತ್ರವಾಗಿ ಪ್ರತಿಭಟನೆಯ ಹಾದಿಯನ್ನು ತುಳಿದಿದ್ದು, ತನ್ನ ಸಹೋದರಿ ಈರಮ್ಮ ಸೇರಿದಂತೆ ಎತ್ತು ಚಕ್ಕಡಿ ಸರಂಜಾಮು ಸಮೇತವಾಗಿ ಪುರಸಭೆಯ ಆವರಣದಲ್ಲಿ ಬುಧವಾರ ಠಿಕಾಣಿ ಹೂಡಿದ್ದಾನೆ. ಪುರಸಭೆಯ ಅಂಗಳದಲ್ಲಿಯೇ ಒಲೆಯನ್ನು ಹೂಡುವ ಮೂಲಕ ಅರಿವುಗೇಡಿ ಅಧಿಕಾರಿಗಳಿಗೂ ಚುರುಕು ಮುಟ್ಟಿಸಿದ್ದಾನೆ.
ಇದನ್ನು ಪ್ರಶ್ನಿಸಿದ ಪುರಸಭೆಯ ಪುರಪಿತೃಗಳು ಸೇರಿದಂತೆ ಮುಖ್ಯಾಧಿಕಾರಿಗಳಿಗೆ ತಕ್ಕ ಉತ್ತರ ನೀಡಿ ಬೆವರಿಸಿದ ವಿರೂಪಾಕ್ಷಪ್ಪ ತನ್ನ ರೌದ್ರಾವತಾರ ತೋರುವ ಮೂಲಕ ಪುರಸಭೆಯಲ್ಲಿ ಸೇರಿದ್ದ ಸಾರ್ವಜನಿಕರಿಗೂ ಉಚಿತ ಮನರಂಜನೆ ನೀಡಿದ್ದಾನೆ. ಪುರಸಭೆಯಲ್ಲಿ ತನ್ನ ದಾಖಲೆಗಳನ್ನು ನೀಡುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದ್ದಾನೆ.
ಈ ಹಂತದಲ್ಲಿ ತಕ್ಷಣ ಎಚ್ಚೆತ್ತುಕೊಂಡ ಪುರಸಭೆಯ ಭ್ರಷ್ಟ ಅಧಿಕಾರಿ ಸಮೂಹ, ಯುವಕನನ್ನು ಸಮಾಧಾನಪಡಿಸಿತಲ್ಲದೆ ಕಳೆದ ಒಂದು ವರ್ಷದಿಂದ ಬಾಕಿ ಉಳಿದುಕೊಂಡಿದ್ದ ಕೆಲಸಕ್ಕೂ ಮುಕ್ತಿ ನೀಡಿದ್ದಾರೆ.
ಅನಕ್ಷರಸ್ಥ ದುರಹಂಕಾರಿ ಜನಪ್ರತಿನಿಧಿಗಳು, ನಿಧಾನಗತಿಯ ಧೋರಣೆ, ತುಂಬಿ ತುಳುಕಾಡುವ ಭ್ರಷ್ಟಾಚಾರ, ಅತ್ಯಂತ ಕಳಪೆ ಕಾಮಗಾರಿಗಳಿಗೆ ರಾಜ್ಯದಲ್ಲಿಯೇ ಕುಖ್ಯಾತಿಯನ್ನು ಪಡೆದುಕೊಂಡಿರುವ ಸವಣೂರ ಪುರಸಭೆ ಎಂಬ ತಿಪ್ಪೆ ಗುಂಡಿಯ ಗಬ್ಬು ವಾಸನೆ ಕ್ಷೇತ್ರದ ಶಾಸಕ ರಾಜ್ಯದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಬಡಿದಿಲ್ಲವೇ ಎಂಬ ಪ್ರಶ್ನೆ ಮಾತ್ರ ಇಂದಿಗೂ ಉಳಿದುಕೊಂಡಿದೆ.