ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧ್ಯತೆ!
ಭಾನುವಾರ ನಡೆದ ಬಿಬಿಎಂಪಿ ಚುನಾವಣೆ ಚಿಕ್ಕಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ಮುಗಿದಿದೆ. ಏಪ್ರಿಲ್ 5 ಕ್ಕೆ ಮತ ಫಲಿತಾಂಶ ಹೊರಬೀಳಲಿದೆ. ಆದರೆ, ಮತದಾನ ಕಡಿಮೆಯಾಗಿರುವುದು ಒಂದಡೆಯಾದರೆ, ಸುಶಿಕ್ಷತರು ಈ ಸಾರಿ ಮತ ಚಲಾಯಿಸದಿರುವುದು ಕಾಂಗ್ರೆಸ್ ಪಕ್ಷಕ್ಕೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರದಲ್ಲಿ ಕೈ ಪಾಳೆಯದಲ್ಲಿ ಭಾರಿ ಬೆಳವಣಿಗೆಗಳು ಶುರುವಾಗಿವೆ.
ಕಾಂಗ್ರೆಸ್ ನ ಮಾಜಿ ಸಚಿವ ಎಚ್ ಎಂ ರೇವಣ್ಣ, ಶಾಸಕ ರಾಮಲಿಂಗಾರೆಡ್ಡಿ ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಅಗತ್ಯ ಬಿದ್ದರೆ ಜೆಡಿಎಸ್ ಬೆಂಬಲ ಕೇಳುವುವುದು ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ. ಜೆಡಿಎಸ್ ನ ಜಮೀರ್ ಅಹ್ಮದ್ ಇದಕ್ಕೆ ಧ್ವನಿಗೂಡಿಸಿದ್ದಾರೆ. ಮೈತ್ರಿ ವಿಚಾರ ಜಮೀರ್ ಅವರ ವೈಯಕ್ತಿಕ ಹೇಳಿಕೆ. ಜೆಡಿಎಸ್ ಇನ್ನೂ ಯಾವ ನಿರ್ಧಾರಕ್ಕೆ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹೊಂದಾಣಿಕೆಗೆ ಇದು ಸೂಕ್ತ ಸಮಯವಲ್ಲ. ಫಲಿತಾಂಶ ಬರಲಿ, ನಂತರ ನೋಡಿದರಾಯಿತು ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಜಾರಿಕೊಂಡಿದ್ದಾರೆ.