ಬೆಲೆ ಏರಿಕೆ : ರೈತಮೋರ್ಚಾ ವಿನೂತನ ಪ್ರತಿಭಟನೆ
ದಿನನಿತ್ಯದ ಅಗತ್ಯ ವಸ್ತುಗಳಾದ ಬೇಳೆ-ಕಾಳು, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಮುಂತಾದ ವಸ್ತುಗಳ ಬೆಲೆ ಆಕಾಶಕ್ಕೇರಿದೆ. ಆದರೆ ಬೆಲೆ ಏರಿಕೆ ದಿನದಿಂದ ದಿನಕ್ಕೆ ಏರುತ್ತಿದ್ದರೂ ಸಹ ಇದನ್ನು ನಿಗ್ರಹಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕಡುಬಡವರು, ಕೂಲಿಕಾರ್ಮಿಕರು, ರೈತಾಪಿ ವರ್ಗ ಹಾಗೂ ಮಧ್ಯಮ ವರ್ಗದ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದ್ದು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಾಮಾನ್ಯ ಜನರ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ತಳೆದು ಬೆಲೆ ಏರಿಕೆ ಗಗನಕ್ಕೇರುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆರ್ಥಿಕ ನೀತಿಯ ಫಲಿತಾಂಶದಿಂದ ಬೆಲೆ ಏರಿಕೆ ಆಗುತ್ತಿದ್ದು, ಬಡವರನ್ನು ಮತ್ತಷ್ಟು ಬಡತನಕ್ಕೆ ತಳ್ಳುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಅಗತ್ಯ ವಸ್ತುಗಳ ಬೆಲೆಯನ್ನು ನಿಗ್ರಹಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದ್ದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಗಿರೀಶ್ ಪಟೇಲ್, ಕಾರ್ಯದರ್ಶಿ ದತ್ತಾತ್ರಿ, ನಗರಾಧ್ಯಕ್ಷ ನಟರಾಜ್, ಬಿಜೆಪಿ ರೈತಮೋರ್ಚಾದ ಗ್ರಾಮಾಂತರ ಅಧ್ಯಕ್ಷ ಜೆ.ಹೆಚ್.ನಂಜುಂಡಪ್ಪ, ಸಿ.ಹೊನ್ನಪ್ಪ, ಸುರೇಶ್, ಪ್ರಶಾಂತ್ಕುಮಾರ್, ಎ.ಕೆ.ಮಹಾದೇವಪ್ಪ, ಗಂಗಾಧರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.