ವಿಪ್ರೋ ವಿಶ್ವವಿದ್ಯಾಲಯಕ್ಕೆ ಗ್ರೀನ್ ಸಿಗ್ನಲ್

ಸುಮಾರು ಮೂರು ಗಂಟೆ ಕಾಲ ನಡೆದ ಚರ್ಚೆಯಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸದಸ್ಯರು ವಿಪ್ರೋ ವಿಶ್ವವಿದ್ಯಾಲಯ ವಿಧೇಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಖಾಸಗಿ ವ್ಯಕ್ತಿಯ ಒಡೆತನಕ್ಕೆ ವಿಶ್ವವಿದ್ಯಾಲಯವನ್ನು ನೀಡುವುದು ಬೇಡ. ಕುಲಪತಿಗಳಿಗೆ ಸಾಕಷ್ಟು ಗೌರವವಿದೆ. ಕುಲಪತಿಗಳನ್ನು ಕುಟುಂಬದ ಕುಲಪತಿಗಳನ್ನಾಗಿ ಮಾಡಬೇಡಿ ಎಂದು ಪ್ರತಿಪಕ್ಷಗಳ ಒಕ್ಕೂರಲ ಕೂಗಾಗಿತ್ತು.
ಅಜೀಂ ಪ್ರೇಮ್ ಜೀ ಅವರ ಅವರ ಸಾಧನೆ ಮತ್ತು ವ್ಯಕ್ತಿತ್ವದ ಬಗ್ಗೆ ಪ್ರಶ್ನೆಯಿಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಸಾಧನೆ ಬಗ್ಗೆ ಸಾಕಷ್ಟು ಗೌರವವಿದೆ. ಆದರೆ, ಮಾಹಿತಿ ಶ್ರೇಷ್ಠ ತಂತ್ರಜ್ಞನಾಗಿರುವ ಪ್ರೇಮ್ ಜೀ, ಉತ್ತಮ ಶಿಕ್ಷಣ ತಜ್ಞನಾಗಲು ಸಾಧ್ಯವೇ. ಅವರ ಸಂಸ್ಥೆಯಿಂದ ಒಂದು ಶಾಲೆಯನ್ನು ನಡೆಸಿದ ಅನುಭವ ಅವರಿಗಿಲ್ಲ. ಹೀಗಿದ್ದಾಗ ವಿಶ್ವವಿದ್ಯಾಲಯದಂತಹ ದೊಡ್ಡ ಸಂಸ್ಥೆಯನ್ನು ಅವರ ಕೈಗಿಡುವುದು ಎಲ್ಲಿಯ ನ್ಯಾಯ.
ಅಲ್ಲದೇ ಅಜೀಂ ಪ್ರೇಮ್ ಜೀ ಅವರಿಗೆ ವಿಶ್ವವಿದ್ಯಾಲಯ ನೀಡಿದರೆ, ಸಾಮಾಜಿಕ ನ್ಯಾಯ ಸಿಗುವುದು ಕಷ್ಟದ ಕೆಲಸ. ಆ ಕಾರಣಕ್ಕಾಗಿ ವಿಪ್ರೋ ಸಂಸ್ಥೆಗೆ ವಿಶ್ವವಿದ್ಯಾಲಯಕ್ಕೆ ಅನುಮತಿ ಬೇಡ ಎನ್ನುವುದು ವಿರೋಧ ಪಕ್ಷಗಳ ಖಡಾಖಂಡಿತ ಮಾತಾಗಿತ್ತು. ಅಜೀಂ ಪ್ರೇಮ್ ಜೀ ಅವರಿಗೆ ವಿಶ್ವವಿದ್ಯಾಲಯದ ಅನುಮತಿ ನೀಡುವದೇ ಆದರೆ, ಇದರ ಸಾಧಕ ಭಾದಕಗಳ ಬಗ್ಗೆ ಕೂಲಂಕಷ ಚರ್ಚೆ ಅಗತ್ಯ. ಈ ಚರ್ಚೆಗಾಗಿ ಜಂಟಿ ಸದನ ಸಮಿತಿಯನ್ನು ರಚಿಸಿ, ಚರ್ಚಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು.
ಆಗ ಪ್ರತಿಪಕ್ಷಗಳ ನಾಯಕರನ್ನು ಸಮಾಧಾನಪಡಿಸಲು ಮುಂದಾದ ಮುಖ್ಯಮಂತ್ರಿ ಯಡಿಯೂರಪ್ಪ, ಅಜೀಂ ಪ್ರೇಮ್ ಜೀ ಮಾಹಿತಿ ತಂತ್ರಜ್ಞಾನದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಬೆಂಗಳೂರನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲಿಬೇಕು. ಇಂತಹ ದೊಡ್ಡ ಉದ್ಯಮಿದಾರರು ಶಿಕ್ಷಣರಂಗಕ್ಕೆ ಕಾಲಿಡುತ್ತಿರುವ ಸಂತಸದ ಸಂಗತಿ. ಹೀಗಿರುವಾಗ ಇದಕ್ಕೆ ವಿರೋಧ ಮಾಡುವುದು ಸರಿಯಲ್ಲ. ವಿಪ್ರೋ ವಿಶ್ವವಿದ್ಯಾಲಯದ ಮೇಲೆ ಸರಕಾರದ ಸಂಪೂರ್ಣ ಹಿಡಿತವಿರುತ್ತದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅವರು ಸಮರ್ಥಿಸಿಕೊಂಡರು, ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಕೂಡಾ ಮುಖ್ಯಮಂತ್ರಿಗಳಿಗೆ ಮಾತಿಗೆ ಧ್ವನಿಗೂಡಿಸಿದರು.












Click it and Unblock the Notifications