Get Updates
Get notified of breaking news, exclusive insights, and must-see stories!

ರಂಗಾಯಣದ 9 ಗಂಟೆಗಳ ರಂಗ ಪ್ರಯೋಗ

Rangayana
ರಂಗಾಯಣ ತನ್ನ ತಾರುಣ್ಯ ಅವಸ್ಥೆಯಲ್ಲೇ ರಂಗಭೂಮಿಯಲ್ಲಿ ಮತ್ತೊಂದು ಹೊಸತು ಸೃಷ್ಟಿಸುವ ಸಾಹಸಕ್ಕೆ ಕಾಲಿಟ್ಟಿದೆ. ದೇಶದ ಯಾವುದೇ ರೆಪರ್ಟರಿಗಳಲ್ಲಿ ನಟವರ್ಗ ನಿರಂತರ 20 ವರ್ಷಗಳು ಒಂದೇ ಸ್ಥಳದಲ್ಲಿ ನೆಲೆಗೊಂಡು ನಿರಂತರವಾಗಿ ವೈವಿದ್ಯಮಯ ನಾಟಕ ಪ್ರಯೋಗಗಳನ್ನು ಪ್ರದರ್ಶಿಸಿದ ಉದಾಹರಣೆ ಸರ್ಕಾರದ ವಲಯದಲ್ಲಿ ಇಲ್ಲ. ಸರ್ಕಾರೇತರ ರಂಗ ರೆಪರ್ಟರಿಗಳಾದ ಮಣಿಪುರದ ಕೋರಸ್ ರೆಪರ್ಟರಿ, ಹಬೀಬ್ ತನ್ವೀರರ ನಯಾ ಥೇಟರ್ ಅಪರೂಪದವುಗಳಾಗಿವೆ ಅಷ್ಟೇ. ನಯಾ ಥೇಟರ್‌ನ ಚೋರ ಚರಣದಾಸ ಸುಮಾರು 40 ವರ್ಷಗಳಿಂದ ಅದೇ ನಟವರ್ಗದಿಂದ ಅಭಿನಯಿಸಲ್ಪಡುತ್ತಿರುವುದು ಅಪವಾದವಷ್ಟೆ.

ಹಿಪೋಲಿಟಸ್ ಗ್ರೀಕ್ ನಾಟಕವಾಗಿರಬಹುದು, ಗೋಪಾಲಕೃಷ್ಣ ಅಡಿಗರ ಭೂಮಿಗೀತ ಕಾವ್ಯ ಪ್ರಯೋಗವಿರಬಹುದು. ಕನ್ನಡದ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿ ಎಂಬ ಕುಚೋದ್ಯಕ್ಕೆ ಒಳಗಾಗಿದ್ದ ದೇವನೂರು ಮಹಾದೇವರ ಕುಸುಮಬಾಲೆಯ ಯಥಾವತ್ ಕಥಾ ರಂಗ ಪ್ರಯೋಗವಾಗಲಿ, ಲಂಕೇಶರ ಗುಣಮುಖ, ಕಾನಾರ್ಡರ ತಲೆದಂಡ, ಟಿಪ್ಪುವಿನ ಕನಸುಗಳು ಹೊರತಾಗಿ ಗಾಂಧಿ v/s ಗಾಂಧಿ, ಚಂದ್ರಹಾಸ, ಕಿಂದರಿಜೋಗಿ, ಶೂದ್ರತಪಸ್ವಿ ಮುಂತಾದವು ರಂಗಾಯಣದ ಹೆಮ್ಮೆಯ ಗರಿಗಳಾಗಿವೆ. ಹ್ಯಾಮ್ಲೆಟ್, ಚಿರೇಬಂದಿವಾಡೆ, ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ಒಥೆಲೋ, ಪುಗಳೇಂದಿ ಪ್ರಹಸನ, ಕೃಷ್ಣೇಗೌಡರ ಆನೆ ಮುಂತಾದ ನಾಟಕಗಳು ರಂಗಾಯಣದ ಶ್ರೇಷ್ಠ ಪ್ರಯೋಗಗಳೆಂಬುದನ್ನು ಸಾಧಿಸಿದೆ. ಜನತೆಯು ಒಪ್ಪಿಕೊಂಡಿದೆ.

ರಂಗಾಯಣದ ನಿರಂತರ ಪ್ರಯೋಗಶೀಲತೆಯಿಂದ ತಾನು ಕಲಿಯುವುದರ ಜೊತೆಗೆ ಕಲಿತದ್ದನ್ನು ಪ್ರಾಯೋಗಿಕವಾಗಿ ಕಲಿಸುವ ನಿಟ್ಟಿನಲ್ಲಿ ಚಿಣ್ಣರ ಮೇಳ, ಬಹುರೂಪಿ, ಯುವರಂಗ ಸಂಸ್ಕೃತಿ ಶಿಬಿರ, ರಂಗ ಕಿಶೋರ ಮಕ್ಕಳ ರಂಗಭೂಮಿ ಮುಂತಾದ ಯೋಜನೆಗಳ ಮೂಲಕ ನಾಡಿನ ಜನಮನದಲ್ಲಿ ಶಾಶ್ವತವಾಗಿ ನೆಲೆಕಂಡುಕೊಂಡಿದೆ ಎನ್ನಬಹುದು. ಇದೇ ನಿಟ್ಟಿನಲ್ಲಿ ರಂಗಾಯಣದ ತನ್ನ 21ನೇ ಹರೆಯದಲ್ಲಿ ಮತ್ತೊಂದು ಮಹಾನ್ ಸಾಹಸಕ್ಕೆ ಕೈಹಾಕಿದೆ.

ಕನ್ನಡದ ಕಾದಂರಿಗಳಲ್ಲಿ ಮೇರು ಕೃತಿ ಎನಿಸಿರುವ ರಾಷ್ಟ್ರಕವಿ ಕುವೆಂಪು ಅವರ ಬೃಹತ್ ಕಾದಂಬರಿ ಮಲೆಗಳಲ್ಲಿ ಮದುಮಗಳು ಸುಮಾರು 9 ಗಂಟೆಯ ಅವಧಿಯಲ್ಲಿ ರಂಗಾಯಣದ ಆವರಣದಲ್ಲಿರುವ ವನರಂಗ, ಭೂಮಿಗೀತ, ಹಾದಿಬದಿರಂಗ, ಕೆರೆ ಏರಿ, ಕುಕ್ಕರಹಳ್ಳಿ ಕೆರೆ ಸುತ್ತಮುತ್ತ ಸುಮಾರು 5 ರಂಗವೇದಿಕೆಗಳಲ್ಲಿ ಪ್ರಯೋಗಕ್ಕೆ ಶೃಂಗಾರಗೊಳ್ಳುತ್ತಿದ್ದಾಳೆ.

ಕಾದಂಬರಿಯಲ್ಲಿ ಬರುವ ಸೊಂಬಾವಿ, ಮೇಗರವಳ್ಳಿ, ಲಕ್ಕುಂದ, ಹೂವಳ್ಳಿ, ತೀರ್ಥಹಳ್ಳಿ, ಹುಲಿಕಲ್ ಗುಡ್ಡ, ಸುತ್ತಮುತ್ತಲಿನ ಮಲೆನಾಡು ಪುನರ್ ಸೃಷ್ಟಿಗೊಂಡು ನಾಯಿಗುತ್ತಿ ಮೂಲಕ ಪ್ರೇಕ್ಷಕರನ್ನು ರಂಗಯಾನ ಅಥವಾ ರಂಗ ಪಯಣವನ್ನು ಕುಳಿತಲ್ಲೆ ಮನೋರಂಗದಲ್ಲಿ ಸೃಷ್ಟಿಸುವ ಸೃಜನಶೀಲ ಕ್ರಿಯೆಗೆ ರಂಗಾಯಣ ಒಂದು ಹೊಸ ಹೆಜ್ಜೆಯಿಟ್ಟಿದೆ.

ರಂಗ ಪ್ರಯೋಗ ಮಾ.27 ರಂದು ರಾತ್ರಿ 8.30 ಗಂಟೆಗೆ ಆರಂಭಗೊಂಡು 5 ವಿವಿಧ ರಂಗವೇದಿಕೆಗಳಲ್ಲಿ ಪ್ರಯೋಗಗೊಂಡು ಬೆಳಿಗ್ಗೆ 5 ಗಂಟೆಗೆ ತನ್ನ ರಂಗಪಯಣವನ್ನು ಮುಕ್ತಾಯಗೊಳಿಸುವ ಮಹತ್ವದ ಕಲ್ಪನೆಗೆ ಸಜ್ಜುಗೊಂಡಿದೆ. ಈ ನಿರಂತರ 9 ತಾಸುಗಳು ಅವಧಿಯಲ್ಲಿ 3 ಅಥವಾ 4 ವಿರಾಮಗಳು ಪ್ರೇಕ್ಷಕರಿಗೆ ಒಂದು ರಂಗದಿಂದ ಮತ್ತೊಂದು ರಂಗವೇದಿಕೆಗೆ ಚಲಿಸಲು ಅವಶ್ಯವಾಗಿರುವಂತೆ ವಿನ್ಯಾಸಗೊಳಿಸಲಾಗುತ್ತಿದೆ.

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರುವ ನೂರಾರು ಪಾತ್ರಗಳನ್ನು ರಂಗದಲ್ಲಿ ಜೀವಂತಗೊಳಿಸಲು ರಂಗಾಯಣದ ವೃತ್ತಿನಿರತ ನಟವರ್ಗದ ಜೊತೆಗೆ ಹೊರಗಿನ 50 ಜನ ಅತಿಥಿ ಕಲಾವಿದರನ್ನು ಈ ಪ್ರಯೋಗದಲ್ಲಿ ತೊಡಗಿಸುವುದರ ಮೂಲಕ ಯುವರಂಗಕರ್ಮಿಗಳಿಗೆ ರಂಗಾಯಣದೊಟ್ಟಿಗೆ ಅಭಿನಯಿಸುವುದು ಸಾಧ್ಯವಾಗಲಿದೆ.

ಮಲಿನಗೊಳ್ಳುತ್ತಿರುವ ಸಾಂಸ್ಕೃತಿಕ ಆವರಣವನ್ನು ರಂಗಭೂಮಿ ತನ್ನ ಅಭಿವ್ಯಕ್ತಿ ಮೂಲಕ ಪರ್ಯಾಯ ಚಿಂತನೆಗೆ ಜನತೆಯನ್ನು ಕೊಂಡೊಯ್ಯಬೇಕಾದುದು ಐತಿಹಾಸಿಕವಾದ ಸಂದರ್ಭವೂ ಆಗಿದೆ. ಈ ಹಿನ್ನೆಲೆಯಲ್ಲಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ರಂಗಪ್ರಯೋಗ ಈ ಎಲ್ಲಾ ಸಾಂಸ್ಕೃತಿಕ ಜಟಿಲತೆಗೆ, ಸಿಕ್ಕುಗಳಿಗೆ ಪೂರಕವಾದ ಉತ್ತರವಾಗಬಲ್ಲದು ಎಂಬ ನಿರೀಕ್ಷೆಯಿದೆ.

30 ದಶಕದ ಮಲೆನಾಡಿನ ಸೀಮೆ ತುಂಗಾನದಿಯ ಹಳ್ಳಕೊಳ್ಳಗಳ ಸುತ್ತಲಿನ ಹಳ್ಳಿಗಳು ಹಲವಾರು ಜನವರ್ಗ ಜಾತಿ ಜನಾಂಗಗಳಿದ್ದರೂ ಮಾನವ ಸಂಬಂಧಗಳಿಂದ ಹೇಗೆ ಜೀವನ ಪ್ರೀತಿ ಮರೆಯುತ್ತಿದ್ದರು ಎಂಬುವ ಅನುಭವಕ್ಕೆ ಒಡ್ಡಿಕೊಳ್ಳುವ ಪ್ರಯತ್ನವಾಗಿದೆ. ರಂಗದಲ್ಲಿಪುನರ್ ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸುಮಾರು 700 ಪುಟಗಳ ಬೃಹತ್ ಕಾದಂಬರಿಯನ್ನು ನಮ್ಮ ಕಾಲದ ಯುವಜನತೆ ಓದುವ ಆನಂದದಿಂದ ವಂಚಿತವಾಗುತ್ತಿರುವ ಸಂದರ್ಭದಲ್ಲಿ, ಓದುವ ರಿಚುಯಲ್‌ಗೆ ಮರಳುವ ಪ್ರಕ್ರಿಯೆಯ ಪ್ರಯೋಗ ಇದಾಗಿದೆ ಎಂದು ಮಲೆಗಳಲ್ಲಿ ಮದುಮಗಳು ನಾಟಕದ ನಿರ್ದೇಶಕ ಸಿ. ಬಸವಲಿಂಗಯ್ಯ ಹೇಳುತ್ತಾರೆ.

ಕುವೆಂಪು ಕಲ್ಪನಾ ಲೋಕದ ಮನೋರಂಗವನ್ನು ರಂಗರೂಪಕವಾಗಿಸುವ ರಂಗಾಯಣದ ಒಂದಲ್ಲ, ಮತ್ತೊಂದು ಹೊಸನಡಿಗೆಯ ಪ್ರಯೋಗವಾಗಿದೆ ಎಂದು ರಂಗಾಯಣದ ನಿರ್ದೇಶಕ ಕಾ.ತ. ಚಿಕ್ಕಣ್ಣ ಹಾಗೂ ನಾಟಕದ ನಿರ್ದೇಶಕ ಸಿ. ಬಸವಲಿಂಗಯ್ಯ ಅಭಿಪ್ರಾಯ ಪಡತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+