ಪುಟ್ಟ ಹುಡುಗಿ ಅನುಶ್ರೀಯ ಬೆಟ್ಟದಷ್ಟು ಸಾಧನೆ
ಚಿಕ್ಕಂದಿನಲ್ಲೇ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲ್ಲೂಕು ಮಟ್ಟದ, ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಪ್ರಶಸ್ತಿ ಪಡೆದು ಕೀರ್ತಿ ಸಂಪಾದಿಸಿರುವ ಈಕೆ ಈಗ ಅಂತಾರಾಷ್ಟ್ರೀಯ ಮಟ್ಟದ ಮಕ್ಕಳ ಹಾಗೂ ಯುವಕರ ಸಮ್ಮೇಳನದಲ್ಲಿ ಪರಿಸರ ಸಂಬಂಧಿ ಚಟುವಟಿಕೆ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಸಿದ್ಧತೆಯಲ್ಲಿ ತೊಡಗಿದ್ದಾಳೆ.
ತೀರ್ಥಹಳ್ಳಿಯ ಎಸ್.ಗುರುದತ್ ಹಾಗೂ ಅಖಿಲ ಗುರುದತ್ ದಂಪತಿಗಳ ಮಗಳಾದ ಅನುಶ್ರೀ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಅಣುಕು ಸಂಸತ್ ಸ್ಪರ್ಧೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು, ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾಳೆ.
ಹಾಗೆಯೇ, ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಗು ವಿಷಯ ಕುರಿತಾದ ಪಿಕ್ ಅಂಡ್ ಸ್ಪೀಚ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದು, ಓದಿನಲ್ಲೂ ಅಷ್ಟೆ ಮುಂದಿದ್ದಾಳೆ. ಈ ಎಲ್ಲಾ ಸಾಧನೆಗಳ ಹಿಂದೆ ಪೋಷಕರು ಹಾಗೂ ಶಿಕ್ಷಕರು ತುಂಬಾ ಸಹಕಾರ ನೀಡಿದ್ದಾರೆ ಎನ್ನುವ ಅನುಶ್ರೀ, ಬ್ರಜಿಲ್ ದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಮಕ್ಕಳ ಸಮ್ಮೇಳನದಲ್ಲಿ ಭಾಗವಹಿಸಲು ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ. ಮುಂದೆ ಐ.ಎ.ಎಸ್. ಓದಿ ಜಿಲ್ಲಾಧಿಕಾರಿಯಾಗಬೇಕೆಂಬ ಕನಸನ್ನು ಹೊಂದಿದ್ದಾಳೆ.