ವೇತನ ಪರಿಷ್ಕಾರ :ಬೀದಿಗಿಳಿದ ಎಸ್ ಕೆಎಫ್ ಕಾರ್ಮಿಕ
ಕಳೆದ ನಾಲಕ್ಕು ವರ್ಷಗಳಿಂದ ಆಡಳಿತ ವರ್ಗ ಸಂಬಳ ಪರಿಷ್ಕರಿಸಿಲ್ಲ. 2008 ರ ಡಿಸೆಂಬರ್ ತಿಂಗಳಲ್ಲಿ ಕಾರ್ಮಿಕ ಸಂಘ ಮತ್ತು ಆಡಳಿತವರ್ಗದ ನಡುವೆ ಈ ಸಂಬಂಧ ಮಾತುಕತೆ ನಡೆದಿತ್ತು. ಆದರೆ 2009ರ ನವೆಂಬರ್ ಬಂದರೂ ವೇತನ ಪರಿಷ್ಕಾರ ಒಡಂಬಡಿಕೆಗೆ ಆಡಳಿತ ವರ್ಗ ಸಹಿ ಹಾಕದಿರುವುದರಿಂದ ಬೀದಿಗೆ ಇಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಕಾರ್ಮಿಕ ಮುಖಂಡರು ದಟ್ಸ್ ಕನ್ನಡ ಡಾಟ್ ಕಾಂಗೆ ತಿಳಿಸಿದರು.
ಬಾಕಿ ಉಳಿದಿರುವ ವೇತನ ಪರಿಷ್ಕರಣೆ ಮಾಡಿ ನೌಕರರಿಗೆ ಸರಾಸರಿ 3,500 ರೂಪಾಯಿ ಸಂಬಳ ಹೆಚ್ಚಿಸಲಾಗುತ್ತದೆ ಎನ್ನುವುದು ಆಡಳಿತ ಮಂಡಳಿಯ ನಿಲುವು. ಆದರೆ, ಕನಿಷ್ಠ ಸರಾಸರಿ 7,000 ರೂ ಸಂಬಳ ಪರಿಷ್ಕಾರ ಮಾಡಬೇಕು, ಜತೆಗೆ ಬಾಕಿ ಸಂಬಳವನ್ನು ಏಕಕಾಲದಲ್ಲಿ ಬಿಡುಗಡೆ ಮಾಡಬೇಕೆನ್ನುವುದು ಕಾರ್ಮಿಕರ ಪ್ರಮುಖ ಬೇಡಿಕೆ.
ಇದಕ್ಕೆ ಒಪ್ಪದ ಎಸ್ ಕೆ ಎಫ್ ಆಡಳಿತ ಮಂಡಳಿ ವೇತನ ಪರಿಷ್ಕಾರವನ್ನು ಮುಂದೂಡತ್ತಲೇ ಬಂದಿದೆ. ಜತೆಗೆ, ಖಾಯಂ ಉದ್ಯೋಗಿಗಳನ್ನು ದೂರ ಇಟ್ಟು, ದಿನಗೂಲಿ ನೌಕರರನ್ನು ಒತ್ತೆಯಾಳುಗಳಂತೆ ಇಟ್ಟುಕೊಂಡು ಉತ್ಪಾದನೆ ಮುಂದುವರೆಸಿದೆ. ಈ ಅನ್ಯಾಯದ ವಿರುದ್ಧ ದನಿ ಎತ್ತುವುದೇ ಇವತ್ತಿನ ಪ್ರತಿಭಟನಾ ಪ್ರದರ್ಶನದ ಉದ್ದೇಶ ಎಂದು ಮಾಕ್ಸ್ರ್ ವಾದಿ ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆಯ ಮುಂದಾಳುಗಳು ತಿಳಿಸಿದರು.
ಹೊಸೂರು ರಸ್ತೆ ಸಿಂಗಸಂದ್ರದ ಎಸ್ ಕೆಎಫ್ ಘಟಕದಿಂದ ಆರಂಭಗೊಂಡ ಪ್ರದರ್ಶನ ಕಾರ್ಮಿಕ ಇಲಾಖಾ ಕಚೇರಿಯತ್ತ ಸಾಗಿತು. ಕರ್ನಾಟಕ ಕಾರ್ಮಿಕ ಕಚೇರಿಗೆ ಬಳಿಗೆ ತೆರಳಿ ಆಯುಕ್ತರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಸಲ್ಲಿಸಲಾಗುವುದು. ಕಾರ್ಮಿಕರ ಅತೃಪ್ತಿ ಮತ್ತು ಆಕ್ರೋಶಕ್ಕೆ ಗುರಿಯಾಗಿರುವ ಈ ಘಟಕದಲ್ಲಿ ಬಿಯರಿಂಗ್ಸ್ , ಆಯಿಲ್ ಸೀಲಿಂಗ್ ಗಳನ್ನು ಉತ್ಪಾದಿಸಲಾಗುತ್ತದೆ.