11 ವರ್ಷಗಳ ಬಳಿಕ ರಣಜಿ ಫೈನಲ್ ಗೆ ಕರ್ನಾಟಕ
ಬೃಹತ್ ಕನಸು ಹೊತ್ತು ಉದ್ಯಾನ ನಗರಿಗೆ ಬಂದಿಳಿದಿದ್ದ ಉತ್ತರ ಪ್ರದೇಶದ ಆಸೆ ಮಂಗಳವಾರ ಬೆಳಗ್ಗೆ ಕರಗಿಹೋಯಿತು. ಕೊನೆಯ ನಾಲ್ಕು ರಣಜಿ ಋತುಗಳಲ್ಲಿ ಮೂರು ಬಾರಿ ಫೈನಲ್ ತಲುಪಿ ಮರೆಯುತ್ತಿದ್ದ ಮೊಹ್ಮದ್ ಕೈಫ್ ಪಡೆಗೆ ಇದು ಅಘಾತಕಾರಿ ಸಂಗತಿಯೇ ಸರಿ. ಕಾರಣ ಕರ್ನಾಟಕ ವಿರುದ್ಧ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 74.2 ಓವರ್ ಗಳಲ್ಲಿ ಕೇವಲ 208 ರನ್ ಗಳಿಗೆ ಔಟಾಯಿತು. ಇದರೊಂದಿಗೆ ಕರ್ನಾಟಕಕ್ಕೆ 367 ರನ್ ಗಳ ಭರ್ಜರಿ ಇನ್ನಿಂಗ್ಸ್ ಮುನ್ನಡೆ ಸಿಕ್ಕಿತು.
ಅಭಿಮನ್ಯು ಮಿಥುನ್(51ಕ್ಕೆ4) ಅವರ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಕೈಫ್ ಪಡೆ ತತ್ತರಿಸಿ ಹೋಯಿತು. ನಾಯಕ ರಾಹುಲ್ ದ್ರಾವಿಡ್ ಗಳಿಸಿದ್ದ ವೈಯಕ್ತಿಕ ಸ್ಕೋರ್ ನ್ನು ದಾಟಲು ಕೂಡಾ ಉತ್ತರ ಪ್ರದೇಶ ತಂಡ ಸಾಧ್ಯವಾಗದೆ ಕೈಚೆಲ್ಲಿ ಪೆವಿಲಿಯನ್ ಸೇರಿತು. ಫಾಲೋ ಆನ್ ಬಚಾವ್ ಆಗಲು ಉತ್ತರ ಪ್ರದೇಶ 426 ರನ್ ಗಳಿಸಬೇಕಾಗಿತ್ತು. ಆದರೆ, ಕರ್ನಾಟಕದ ತಂಡ ನಾಯಕ ರಾಹುಲ್ ದ್ರಾವಿಡ್ ಎದುರಾಳಿ ಮೇಲೆ ಫಾಲೋಆನ್ ಹೇರಲಿಲ್ಲ. ಬದಲಿಗೆ ಎರಡನೇ ಇನ್ನಿಂಗ್ಸ್ ನ ಬ್ಯಾಟಿಂಗ್ ಆರಂಭಿಸಿತು. ಮೂರನೇ ದಿನದಾಟ ಅಂತ್ಯಕ್ಕೆ ಕರ್ನಾಟಕ 43 ರನ್ 3 ವಿಕೆಟ್ ಕಳೆದುಕೊಂಡಿತ್ತು. ಪಿಯೂಷ್ ಚಾವ್ಲಾ ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.