ಜ.5ರಂದು ವಿಷ್ಣು, ಜೈನ್, ಅಶ್ವತ್ಥಗೆ ಶ್ರದ್ಧಾಂಜಲಿ
ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಈ ಮಹನೀಯರಿಗಾಗಿ ಏರ್ಪಡಿಸಲಾಗಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಗೃಹ ಸಚಿವ ವಿಎಸ್ ಆಚಾರ್ಯ, ಮಾಜಿ ಸಂಸದ ಅಂಬರೀಷ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಭಾಗವಹಿಸಲಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲ ವಿಭಾಗದ ಸಂಘಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಹಿರಿಯ ಕಿರಿಯ ಕಲಾವಿದರು ಭಾಗವಹಿಸಲಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲೇ ಇವರನ್ನೆಲ್ಲ ಕನ್ನಡ ಚಿತ್ರರಂಗ ಕಳೆದುಕೊಂಡಿದೆ. ಭೂತಯ್ಯನ ಮಗ ಅಯ್ಯು, ಭಕ್ತ ಸಿರಿಯಾಳ, ಪ್ರಾಯ ಪ್ರಾಯ ಪ್ರಾಯದಂಥ ಯಶಸ್ವಿ ಚಿತ್ರಗಳನ್ನು ನೀಡಿದ ಚಂದೂಲಾಲ್ ಜೈನ್ ಡಿಸೆಂಬರ್ 17ರಂದು ನಿಧನರಾದರು. ತಮ್ಮ ವಿಶಿಷ್ಟ ಕಂಠದಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಗಾಯಕ ಸಿ ಅಶ್ವತ್ಥ್ ತಮ್ಮ ಹುಟ್ಟುಹಬ್ಬದಂದು ಡಿಸೆಂಬರ್ 29ರಂದು ಇಹಲೋಕ ತ್ಯಜಿಸಿ ಸುಗಮ ಸಂಗೀತ ಲೋಕವನ್ನು ಅನಾಥರನ್ನಾಗಿ ಮಾಡಿದರು. ಅಶ್ವತ್ಥ್ ಸಾವಿನ ಹೊಡೆತದಿಂದ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳುವ ಮೊದಲೇ ಡಿಸೆಂಬರ್ 30ರಂದು ಸಾಹಸಸಿಂಹ ವಿಷ್ಣುವರ್ಧನ್ ಅವರ ಸಾವು ಬರಸಿಡಿಲಿನಂತೆ ಬಂದೆರಗಿತ್ತು.