ತೀರ್ಥಹಳ್ಳಿ ಲವ್ ಜಿಹಾದ್ ಗೆ ಹೊಸ ತಿರುವು

ಮಂಗಳೂರು ಸೇರಿ ಸುತ್ತಮುತ್ತ ಲವ್ ಜಿಹಾದ್ ಪ್ರಕರಣಗಳು ವ್ಯಾಪಕವಾಗಿವೆ ಎಂದು ಹೇಳಲಾಗಿದ್ದು, ಇಸ್ಲಾಂ ಧರ್ಮದ ಯುವಕರು ಹಿಂದು ಧರ್ಮದ ಯುವತಿಯನ್ನು ಮದುವೆಯಾಗುತ್ತಿರುವ ಪ್ರಕರಣಗಳು ಸರ್ವೆ ಸಾಮಾನ್ಯವಾಗಿದೆ. ಇದೊಂದು ಜಾಲ ಎಂದು ಹೇಳಲಾಗಿದ್ದು, ಉದ್ದೇಶಪೂರ್ವಕವಾಗಿ ಲವ್ ಜಿಹಾದ್ ಅಭಿಯಾನವನ್ನು ಕೆಲ ಮುಸ್ಲಿಂ ಸಂಘಟನೆಗಳನ್ನು ಆರಂಭಿಸಿವೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಇದೇ ಮಾದರಿಯಲ್ಲಿ ತೀರ್ಥಹಳ್ಳಿಯ ಸಹನಾ ಎಂಬ ಹಿಂದು ಧರ್ಮದ ಯುವತಿಯನ್ನು ಮುಸ್ಲಿಂ ಧರ್ಮದ ತೌಫಿಕ್ ಪ್ರೀತಿಸಿದ್ದ. ಡಿಸೆಂಬರ್ 1 ರಂದು ಈ ಇಬ್ಬರು ಪ್ರೇಮಿಗಳು ನಾಪತ್ತೆಯಾಗಿದ್ದರು. ಡಿಸೆಂಬರ್ 4 ರಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಪತ್ತೆಯಾಗಿದ್ದ ಈ ಜೋಡಿಗಳು ಮದುವೆ ಮಾಡಿಕೊಂಡಿರುವುದಾಗಿ ಹೇಳಿದ್ದರು. ಸ್ವತಃ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಹನಾ, ನಾನು ತೌಫಿಕ್ ನನ್ನು ಮನಸಾರೆ ಪ್ರೀತಿಸುತ್ತಿದ್ದು, ಇಷ್ಟಪಟ್ಟು ಮದುವೆಯಾಗಿರುವುದು ಹೇಳಿಕೆ ನೀಡಿದ್ದರು. ಕನ್ನಡ ವಾರ್ತಾವಾಹಿನಿಯಲ್ಲಿ ಸಂದರ್ಶನ ನೀಡಿದ್ದ ಈ ಪ್ರೇಮಿಗಳು ಇಷ್ಟಪಟ್ಟು ಪ್ರೀತಿಸಿ, ಮದುವೆಯಾಗಿರುವುದಾಗಿ ಹೇಳಿದ್ದರು.
ಇಷ್ಟೊತ್ತಿಗಾಗಲೇ ತೀರ್ಥಹಳ್ಳಿ ಠಾಣೆಯಲ್ಲಿ ತೌಫಿಕ್ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಸಿಂಧನೂರಿನಿಂದ ಕರೆತಂದ ತೀರ್ಥಹಳ್ಳಿ ಠಾಣೆ ಪೊಲೀಸರು ಈ ಇಬ್ಬರನ್ನು ಅವರವರ ಪೋಷಕರಿಗೆ ಒಪ್ಪಿಸಿದ್ದರು. ಆಗ ಸಹನಾ ಕಾಣಿಯಾಗಿದ್ದರು. ಇದನ್ನು ಪ್ರಶ್ನಿಸಿದ್ದ ತೌಫಿಕ್ ಹೈಕೋರ್ಟ್ ಅರ್ಜಿ ಸಲ್ಲಿಸಿ ನನ್ನ ಪತ್ನಿ ಸಹನಾ ಅಲಿಯಾಸ್ ಸುಹಾನಾಳನ್ನು ಹುಡುಕಿ ಎಂದು ಮನವಿ ಮಾಡಿಕೊಂಡಿದ್ದ. ಈ ವೇಳೆಗಾಗಲೇ ತೀರ್ಥಹಳ್ಳಿಯ ವಾತಾವರಣ ಸಂಪೂರ್ಣ ಉದ್ವಿಗ್ನಗೊಂಡಿತ್ತು. ಲವ್ ಜಿಹಾದ್ ಸಂಚಿನೊಳಗೆ ಅಮಾಯಕ ಹಿಂದು ಯುವತಿಯನ್ನು ಮುಸ್ಲಿಂ ಯುವಕರು ಪ್ರೀತಿಸುವ ನಾಟಕವಾಡಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಇದೀಗ ಎಲ್ಲವೂ ಬದಲಾಗಿದ್ದು, ಸಹನಾ ಅಲಿಯಾಸ್ ಸುಹಾನಾಳಿಗೆ ಹಿಂದು ಧರ್ಮದ ಪದ್ಧತಿಯಂತೆ ಹಿಂದು ಧರ್ಮದ ಇಂಜಿನಿಯರ್ ಪದವೀಧರ ಹುಡುಗನೊಂದಿಗೆ ಮದುವೆಯಾಗಿದೆ. ಆದರೆ, ಅಂದು ತೌಫಿಕ್ ನೊಂದಿಗೆ ಮದುವೆಯಾಗಿರುವುದಾಗಿ ಹೇಳಿದ್ದ ಸಹನಾಳ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮದುವೆ ಉಸ್ತುವಾರಿ ವಹಿಸಿಕೊಂಡಿದ್ದ ಭಜರಂಗದಳದ ಸಂತೋಷ ಎಂಬುವವರು, ಸಹನಾಳಿಗೆ ಮದುವೆ ಮಾಡಿಸಿರುವುನ್ನು ಒಪ್ಪಿಕೊಂಡಿದ್ದಾರೆ. ಸಹನಾ ಒತ್ತಡಕ್ಕೆ ಸಿಲುಕಿ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಳು. ಆಕೆಯನ್ನು ಅಪಹರಣ ಮಾಡಲಾಗಿತ್ತು. ತೌಫಿಕ್ ನೊಂದಿಗೆ ಮದುವೆಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಹನಾ ಮತ್ತು ಇಂಜಿನಿಯರ್ ಹುಡುಗನ ಮನೆಯವರ ಒಪ್ಪಿಗೆ ಪಡೆದು ಮದುವೆ ಮಾಡಿಸಿರುವುದಾಗಿ ಸಂತೋಷ ಹೇಳಿದ್ದಾರೆ. ತೌಫಿಕ್ ಕಡೆಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications