ನೀರು ದರ ಏರಿಕೆ ಇಲ್ಲ: ಸಚಿವ ಕಟ್ಟಾ
ಮುಂದಿನ ತಿಂಗಳಲ್ಲಿ ನಡೆಯುವ ಮಂಡಲಿ ಸಭೆಯಲ್ಲಿ ನೀರಿನ ದರ ಏರಿಕೆ ಕುರಿತು ಚರ್ಚೆ ನಡೆಯಲಿದೆ. ಇತ್ತೀಚಿಗಷ್ಟೆ ವಿದ್ಯುತ್ ದರಹೆಚ್ಚಳವಾದ ಕಾರಣ ಸಂಸ್ಥೆ ಮೇಲೆ ಪ್ರತಿ ತಿಂಗಳು 2 ಕೋಟಿ ರೂ. ಹೆಚ್ಚವರಿ ವೆಚ್ಚ ಬರುತ್ತಿದ್ದು, ಅದನ್ನು ಸರಿದೂಗಿಸಲು ಅಲ್ಪ ಪ್ರಮಾಣದಲ್ಲಿ ಶುಲ್ಕ ಏರಿಸಬೇಕೆಂಬ ವಿಚಾರ ಅಧಿಕಾರಿ ವರ್ಗದಲ್ಲಿದೆ. ಆದರೆ ಮುಂದೆ ಬರಲಿರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ದರ ಪರಿಷ್ಕರಣೆ ಮಾಡದಿರುವಂತೆ ಮುಖ್ಯಮಂತ್ರಿ ಜಲಮಂಡಳಿ ಸಚಿವರಿಗೆ ಸೂಚಿಸಿದ್ದಾರೆನ್ನಲಾಗಿದೆ. ಹಾಗಾಗಿ ಯುಗಾದಿವರೆಗೂ ಗ್ರಾಹಕರು ನಿರಾಳವಾಗಿ ರಬಹುದು.
ಮಳೆನೀರು ಕೊಯ್ಲಿಗೆ ಕಾಯ್ದೆ: ಬೆಂಗಳೂರು ಮಹಾನಗರದಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಈ ಸಂಬಂಧ ನಿರ್ಧಾರ ಕೈಗೊಂಡಿದ್ದು, ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಲು ಕಾಯ್ದೆ ರೂಪಿಸಲಾಗುತ್ತಿದೆ. ಮುಂದಿನ ಬಜೆಟ್ಗೆ ಮುನ್ನ ಕಾಯ್ದೆ ಸಿದ್ಧಪಡಿಸಿ ಅನುಮೋದನೆ ಪಡೆಯಲಾಗುವುದು. ಜತೆಗೆ ಈ ಪ್ರಸ್ತಾಪವನ್ನು ರಾಜ್ಯದ ಎಲ್ಲ ನಗರ ಪ್ರದೇಶಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಹಾಗಾಗಿ ನಗರಾಭಿವೃದ್ಧಿ, ಲೋಕೋಪಯೋಗಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ.
ಇದರಿಂದಾಗಿ ಸರ್ಕಾರದ ಎಲ್ಲ ಕಚೇರಿಗಳು, ಶಾಲಾ-ಕಾಲೇಜು, ಕೈಗಾರಿಕೆಗಳಲ್ಲಿ ಮಳೆನೀರು ಅನುಷ್ಠಾನಗೊಳ್ಳಲಿದೆ ಎಂದು ಸಚಿವ ಕಟ್ಟಾ ತಿಳಿಸಿದರು.ಮನೆಗಳಲ್ಲಿ ಮಳೆಕೊಯ್ಲು (rain water harvesting)ವಿಧಾನವನ್ನು ಬಳಸಿ ಪರಿಸರ ಜಾಗೃತಿ ಮೆರೆಯುವ ಗ್ರಾಹಕರನ್ನು ಪ್ರೋತ್ಸಾಹಿಸಲು ನೀರಿನ ಬಿಲ್ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆದಿದೆ . ವಾಣಿಜ್ಯ ಕಟ್ಟಡಗಳಿಗೂ ಈ ನೀತಿ ಅನ್ವಯವಾಗಲಿದೆ. ಸೌರಶಕ್ತಿ ಬಳಸುವ ಗ್ರಾಹಕರಿಗೆ ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿಯನ್ನು ಸರ್ಕಾರ ಈಗಾಗಲೆ ನೀಡುತ್ತಿದೆ ಎಂದು ಕಟ್ಟಾ ಹೇಳಿದರು.