ಸಿದ್ದುಗೆ ಸಿಎಂ ಅವಕಾಶ ಸಿಕ್ರೆ ಬೆಂಬಲ; ಎಚ್ಡಿಕೆ
ಕನ್ನಡದ ವಾರ್ತಾವಾಹಿನಿಯಲ್ಲಿ(ಟಿವಿ9) ಸಂದರ್ಶನ ನೀಡಿದ ಅವರು, ಸಿದ್ಧರಾಮಯ್ಯ ಅವರು ಜೆಡಿಎಸ್ ಮೂಲಕವೇ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಒದಗಿ ಬಂದರೆ ನಮ್ಮ ಬೆಂಬಲವಂತೂ ಖಂಡಿತಾ ಇದೆ ಎಂದರು. ಸಿದ್ಧರಾಮಯ್ಯ ಅವರು ರಾಜಕೀಯ ಆರಂಭಿಸಿದ್ದು ಜನತಾದಳದ ಮೂಲಕ, ನಮ್ಮ ಪಕ್ಷದ ವೇದಿಕೆಯಲ್ಲೇ ಅವರ ದೊಡ್ಡ ನಾಯಕರಾಗಿದ್ದಾರೆ. ಯಾವುದೋ ಕೆಟ್ಟ ಗಳಿಗೆ ಹಾಗೂ ಕೆಲವರ ಹಿತಾಸಕ್ತಿಗಾಗಿ ಅವರು ಜೆಡಿಎಸ್ ನಿಂದ ದೂರವಾದರು. ಏನಾದರಾಗಲಿ ಅವರಿಗೆ ಸಿಎಂ ಆಗುವ ಅವಕಾಶ ಒದಗಿ ಬಂದರೆ ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ದೋಸ್ತಿ ಮಾಡಿಕೊಂಡಿವೆ. ಜೆಡಿಎಸ್ ಕಾಂಗ್ರೆಸ್ ದೋಸ್ತಿಗೆ ಸಿದ್ದು ವಿರೋಧ ವ್ಯಕ್ತಪಡಿಸಿದ್ದು, ನಂತರ ಹೈಕಮಾಂಡ್ ನಿರ್ಧಾರಕ್ಕೆ ವಿರೋಧವನ್ನು ಕೈಬಿಟ್ಟಿರುವುದು ಗೊತ್ತಿರುವ ಸಂಗತಿ. ಮುಂದಿನ ವರ್ಷ ಫೆಬ್ರವರಿ 21 ಕ್ಕೆ ಬೃಹತ್ ಬೆಂಗಳೂರು ಮಹಾಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಬೇಕು ಎಂಬ ಏಕೈಕ ಕಾರಣದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಮಾತುಗಳು ಕೇಳಿಬರುತ್ತಿವೆ. ಇದೀಗ ಕುಮಾರಸ್ವಾಮಿ ಅವರ ಹೇಳಿಕೆ ಬಿಬಿಎಂಪಿ ಚುನಾವಣೆಯ ಮೈತ್ರಿಗೆ ಸನ್ನಿಹಿತವಾಗಲಿದೆಯೇ ?
ಈ ಹಿಂದೆ ಮಾಜಿ ಸಚಿವ ಎಚ್ ಡಿ ರೇವಣ್ಣ ಕೂಡ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಬೆಂಬಲಿಸುವ ಹೇಳಿಕೆ ನೀಡಿದ್ದರು. ಇಂದು ಕುಮಾರಸ್ವಾಮಿ ಕೂಡ ಇದೇ ಹೇಳಿಕೆ ನೀಡಿದ್ದಾರೆ. ಆದರೆ, ಜೆಡಿಎಸ್ ಹೈಕಮಾಂಡ್ ನಿಂದ ಈ ಬಗ್ಗೆ ಅಧಿಕೃತ ಅನುಮತಿ ದೊರೆತಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ...
(ದಟ್ಸ್ ಕನ್ನಡ ವಾರ್ತೆ)