ಹಾಲಿನ ದರ ಏರಿಕೆ ಇಲ್ಲ. ಸೋಮಶೇಖರರೆಡ್ಡಿ
ಅವರು ಬಳ್ಳಾರಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಜಿ ಸೋಮಶೇಖರರೆಡ್ಡಿ, ಕೆಎಂಎಫ್ ರಾಜ್ಯದಲ್ಲಿ ಮಾರಾಟ ಮಾಡುವ ಹಾಲಿನ ದರವನ್ನು ಯಾವ ಕಾರಣಕ್ಕೂ ಹೆಚ್ಚಳ ಮಾಡುವುದಿಲ್ಲ. ಅಂತಹ ಚಿಂತನೆ ಕೂಡಾ ಕೆಎಂಎಫ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಹೆಚ್ಚುವರಿಯಾಗಿ ದೊರೆಯುವ ಹಾಲನ್ನು ಹೊರರಾಜ್ಯಗಳಿಗೆ ಮಾರಾಟ ಮಾಡುವಾಗ ಮಾತ್ರ ಹಾಲಿನ ದರವನ್ನು ಹೆಚ್ಚಳ ಮಾಡಲಾಗುವುದು ಎಂದರು. ಕೆಎಂಎಫ್ ಹಾಲು ಬಳಸುವ ಗ್ರಾಹಕರು ಯಾವ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ಬಿಸಿ ಗ್ರಾಹಕರಿಗೆ ಬಿಸಿತುಪ್ಪವಾಗಿದೆ. ಇದರ ಬೆನ್ನಲ್ಲೇ ಸರಕಾರ ವಿದ್ಯುತ್ ದರ ಏರಿಸಿದ್ದು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಹಿಂದೆಯ ಕೆಎಂಎಫ್ ಹಾಲಿನ ದರ ಏರಿಸುವ ಸೂಚನೆ ಕಂಡು ಬಂದಿತ್ತು. ಆದರೆ, ಎಲ್ಲ ವಸ್ತುಗಳ ಬೆಲೆ ಒಂದೇ ಸಮಯಕ್ಕೆ ಏರಿಸಿದರೆ, ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣದಿಂದ ಹಾಲಿನ ದರ ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗುವ ಸಾಧ್ಯತೆ ಇದೆ. ಸದ್ಯದಲ್ಲೇ ವಿಧಾನ ಪರಿಷತ್ ಚುನಾವಣೆ ಕೂಡಾ ಸರಕಾರದ ಈ ನಿರ್ಧಾರಕ್ಕೆ ಕಾರಣವಾಗಿರಬಹುದು.
ದರ ಏರಿಕೆ ವಿಚಾರವಾಗಿ ರಾಜ್ಯದ 13 ಹಾಲು ಒಕ್ಕೂಟಗಳು ಒಂದೊಂದು ರೀತಿಯ ಪ್ರಸ್ತಾವನೆ ಸಲ್ಲಿಸಿವೆ. ಈ ಸಂಬಂಧ ಇದೇ ತಿಂಗಳ 30 ರಂದು ಕೆಎಂಎಫ್ ಆಡಳಿತ ಮಂಡಳಿಯಲ್ಲಿ ಚರ್ಚೆ ನಡೆಯಲಿದೆ. ಸರಕಾರ ಸಮ್ಮತಿಸಿದರೆ ಜನವರಿ 1 ರಿಂದ ಬೆಲೆ ಏರಿಕೆಯಾಗಲಿದೆ ಎನ್ನುವ ಸುದ್ದಿಯೂ ವ್ಯಾಪಕವಾಗಿತ್ತು.
(ದಟ್ಸ್ ಕನ್ನಡ ವಾರ್ತೆ)