ಜ.4ಕ್ಕೆ ಬಿಜೆಪಿ ನೂತನ ಅಧ್ಯಕ್ಷರಾಯ್ಕೆ, ಡಿವಿಎಸ್
ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಚುನಾವಣೆ ಅಧಿಕಾರಿ ತಾವರ್ ಚಂದ್ ಗೆಹ್ಲೋಟ್, ರಾಜ್ಯ ಚುನಾವಣಾಧಿಕಾರಿ ಡಾ.ಶಿವಯೋಗಿ ಸ್ವಾಮಿ ಹಾಗೂ ರಾಜ್ಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಹಾಲಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರ ಅವಧಿ ಇದೇ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಮಂಡಲ ಹಾಗೂ ಜಿಲ್ಲಾ ಸಮಿತಿಗಳ ಚುನಾವಣೆಯನ್ನು ಮುಂದೂಡ ಲಾಗಿದೆ. ಡಿ.18 ರಂದು ಮೇಲ್ಮನೆ ಚುನಾವಣೆ ಮುಕ್ತಾಯಗೊಂಡ ಬಳಿಕ ಮಂಡಲ ಹಾಗೂ ಜಿಲ್ಲಾ ಸಮಿತಿಗಳಿಗೆ ಚುನಾವಣೆ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಭೆಯ ಬಳಿಕ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಮೊದಲು ಡಿ.15 ರೊಳಗೆ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲು ದಿನಾಂಕ ನಿಗದಿಪಡಿಸಲಾಗಿತ್ತು. ಅಲ್ಲದೆ, ಡಿ.1 ರಿಂದ 18 ರವರೆಗೆ ಜಿಲ್ಲಾ ಸಮಿತಿಗಳ ಪದಾಧಿಕಾರಿಗಳ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು.
28 ರೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧ : ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಇದೇ ತಿಂಗಳ 28 ರೊಳಗೆ ಆಯ್ಕೆ ಮಾಡಲು ರಾಜ್ಯ ಬಿಜೆಪಿ ಮುಖಂಡರು ತೀರ್ಮಾನಿಸಿದ್ದಾರೆ. ಸೋಮವಾರ ಸಭೆ ಸೇರಿದ ಸದಾನಂದಗೌಡ, ಯಡಿಯೂರಪ್ಪ, ಅನಂತಕುಮಾರ್, ಶೆಟ್ಟರ್ ಹಾಗೂ ಪದಾಧಿಕಾರಿಗಳು ಈ ನಿರ್ಧಾರ ಕೈಗೊಂಡರು. ಇದೇ 25 ರೊಳಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಕಳುಹಿಸುವಂತೆ ಜಿಲ್ಲಾ ಸಮಿತಿಗಳಿಗೆ ಸೂಚಿಸಲು ತೀರ್ಮಾನಿಸಲಾಯಿತು. ನಂತರ ರಾಜ್ಯ ಚುನಾವಣೆ ಸಮಿತಿ ಇನ್ನೊಮ್ಮೆ ಸಭೆ ಸೇರಿ ಅಭ್ಯರ್ಥಿಗಳ ಕರಡು ಪಟ್ಟಿ ಸಿದ್ಧಪಡಿಸಿ ಅನುಮೋದನೆಗೆ ದಿಲ್ಲಿಗೆ ರವಾನಿಸಲು ನಿರ್ಧರಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)