ಮೆಜೆಸ್ಟಿಕ್ ಬಸ್ ನಿಲ್ದಾಣ ಬಂದ್; ಅಶೋಕ್
ಕೆಂಪೇಗೌಡ ಬಸ್ ನಿಲ್ದಾಣ 35 ಎಕರೆ ಪ್ರದೇಶದಲ್ಲಿದ್ದು ಇದರಲ್ಲಿ ಮೆಟ್ರೋ ಕಾಮಗಾರಿಗಾಗಿ 20ಎಕರೆ ಬಿಟ್ಟು ಕೊಡಲಾಗುತ್ತಿದೆ. ಅದರಲ್ಲಿ 7ಎಕರೆಯನ್ನು ಮೆಟ್ರೋ ಬಳಸಿಕೊಳ್ಳಲಿದೆ. ಮೆಟ್ರೋ ಕಾಮಗಾರಿ ಮುಗಿದ ನಂತರ ವಿಭಿನ್ನ ವಿನ್ಯಾಸದ ಅಂತಾರಾಷ್ಟ್ರೀಯ ಗುಣಮಟ್ಟದ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಬಸ್ ಗಳ ಮಾರ್ಗಕ್ಕನುಗುಣವಾಗಿ ಶಾಂತಿನಗರ ನಿಲ್ದಾಣ, ಬಾಳೇಕಾಯಿ ಮಂಡಿ, ಹೆಬ್ಬಾಳ ಮತ್ತು ಪೀಣ್ಯದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿ ಸ್ಥಳಾಂತರಿಸಲಾಗುವುದು ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.
ಕೆಂಪೇಗೌಡ ಬಸ್ ನಿಲ್ದಾಣ ಸ್ಥಳಾಂತರಗೊಳ್ಳುವ ಮೊದಲು ಸಾರ್ವಜನಿಕರಿಗೆ ಎಲ್ಲಾ ಮಾಹಿತಿ ನೀಡಲಾಗುತ್ತದೆ ಮತ್ತು ಪತ್ರಿಕೆಗಳಲ್ಲೂ ಜಾಹೀರಾತು ನೀಡಲಾಗುತ್ತದೆ. ತಾತ್ಕಾಲಿಕ ಬಸ್ ನಿಲ್ದಾಣಗಳಿಂದ ನಗರದ ಎಲ್ಲಾ ಬಡಾವಣೆಗಳಿಗೂ ಬಿಎಂಟಿಸಿ ಸಂಪರ್ಕ ಕಲ್ಪಿಸಲಾಗುವುದು ಎಂದರು. ನವೆಂಬರ್ 24ರಂದು ವಿಧಾನಸೌಧದ ಬಳಿ ಹಸಿರು ಆಟೋ ಸಂಚಾರಕ್ಕೆ ಚಾಲನೆ ನೀಡಲಾಗುವುದು ಮತ್ತು ಮುಂದೆ ಕಾರ್ಖಾನೆಗಳಿಂದ ಬರುವ ಆಟೋಗಳು ಹಸಿರು ಬಣ್ಣದಲ್ಲಿರುತ್ತದೆ ಎಂದು ಅಶೋಕ್ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)