ಆಟೋ ಹಸಿರು ಬಣ್ಣ ಆದೇಶ ರದ್ದು, ಅಶೋಕ್

ಬುಧವಾರ (ನ.11) ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಸಚಿವರು, ಆಟೋಗಳಿಗೆ ಹಸಿರು ಬಣ್ಣ ಬಳಿಯಲು ಗರಿಷ್ಠ ಮೂರು ಸಾವಿರ ರೂಪಾಯಿ ವೆಚ್ಚ ಮಾಡಬೇಕಿತ್ತು. ಆದರೆ ತಪ್ಪು ಗ್ರಹಿಕೆಯಿಂದ ರೂ 15,000ಕ್ಕೂ ಹೆಚ್ಚು ಹಣ ಅಗತ್ಯ ಎಂಬ ಆತಂಕ ಆಟೋ ಮಾಲೀಕರಲ್ಲಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಬಣ್ಣಗಳ ಆಯ್ಕೆ ಸ್ವಾತಂತ್ರ್ಯವನ್ನು ಅವರಿಗೇ ನೀಡಲು ನಿರ್ಧರಿಸಲಾಗಿದೆಯೆಂದು ಹೇಳಿಕೆ ನೀಡಿದ್ದಾರೆ.
ವಾಹನಗಳ ಸಾಮರ್ಥ್ಯ ಪರೀಕ್ಷೆಗಾಗಿ ನೆಲಮಂಗಲದ ಬಳಿ 5.20 ಎಕರೆ ವಿಸ್ತೀರ್ಣದ ವಿಶೇಷ ಪರೀಕ್ಷಾ ಕೇಂದ್ರ ಸ್ಥಾಪಿಸಲು 15 ಕೋಟಿ ರೂಪಾಯಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೇಂದ್ರದ ಅನುಮೋದನೆ ದೊರೆತ ತಕ್ಷಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಯಲಹಂಕದ ಬಳಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಚಾಲಕರ ಅತ್ಯಾಧುನಿಕ ತರಬೇತಿ ಕೇಂದ್ರ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಹಾಸನದಲ್ಲಿ 100 ಎಕರೆ ವಿಸ್ತಾರದಲ್ಲಿ ಸರ್ಕಾರಿ ವಾಹನ ಚಾಲನಾ ತರಬೇತಿಗಾಗಿ ಪ್ರತ್ಯೇಕ ಕೇಂದ್ರ ರೂಪುಗೊಂಡಿದ್ದು, 15 ದಿನದಲ್ಲಿ ಉದ್ಘಾಟಿಸಲಾಗುವುದು ಎಂದು ಅಶೋಕ್ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications