ಎಲ್ಲಿದೆಯೋ ನ್ಯಾಯ ಅಣ್ಣಾ ಎಲ್ಲಿದೆಯೋ ನ್ಯಾಯ?

ಸಮಾಜದಲ್ಲಿ ಸಮಾನತೆ ಮೂಡಿಸಬೇಕಾಗಿರುವ ಇಂತಹ ಪರಿಸ್ಥಿತಿಯಲ್ಲೂ ಜಾತಿ ಧರ್ಮದ ಸಂಕೋಲೆ ಹಾಕಿಕೊಂಡು ಕಟ್ಟುಪಾಡುಗಳಿಂದ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ದತಿ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲೇ ನಡೆದಿರುವುದು ವಿಪರ್ಯಾಸದ ವಿಚಾರವಾಗಿದೆ.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ದುಡುಪನಹಳ್ಳಿಯ ಸೋಲಿಗ ಸಮುದಾಯದ ಯುವಕ ಮಂಜುನಾಥ್ ಆಂಧ್ರ ಮೂಲದ ಗಂಗಾಮತಸ್ಥ ಜನಾಂಗದ ವಿಜಯಲಕ್ಷ್ಮಿಯನ್ನ ಕಳೆದ ಏಳುವರ್ಷಗಳ ಹಿಂದೆ ಪ್ರೇಮಿಸಿ ವರಿಸಿದ್ದಾನೆ. ಸಾಮಾನ್ಯವಾಗಿ ಸೋಲಿಗ ಸಮುದಾಯದಲ್ಲಿ ಜಾತಿ ಪದ್ದತಿ ಇನ್ನೂ ಜೀವಂತವಾಗಿರುವುದರಿಂದ ಕಟ್ಟುಪಾಡುಗಳನ್ನ ಮೀರಿ ಬೇರೆ ಜಾತಿಯ ಹುಡುಗಿಯನ್ನ ವಿವಾಹವಾಗಿದ್ದಾನೆಂದು ಹೇಳಿ ಕುಲದಿಂದ ಹೊರಹಾಕಿ ದಂಡ ಹಾಕಿದ್ದಾರೆ.
ನ್ಯಾಯಸ್ಥಾನದಲ್ಲಿನ ಪಂಚಾಯಿತಿದಾರರೆನಿಸಿದ ಕೆಲವರು ದಂಡ ಮತ್ತು ಬಹಿಷ್ಕಾರ ಹಾಕಿರುವ ಬಗ್ಗೆ ಹಲವು ಬಾರಿ ಪೋಲೀಸರಿಗೆ ಮತ್ತು ಅಧಿಕಾರಿಗಳಿಗೆ ದೂರು ನೀಡಿದ್ದರೂ ಮಂಜುನಾಥ್ ಮತ್ತು ತಾಯಿ ಚಿಕ್ಕಮ್ಮನ ಕುಟುಂಬವನ್ನ ಬಹಿಷ್ಕರಿಸಿದ್ದಾರೆ. ಪ್ರೀತಿ ಮಾಡಿ ಬೇರೆ ಜಾತಿಯ ಹುಡುಗಿಯ ವಿವಾಹವಾದ ತಪ್ಪಿಗೆ ಯಾವುದೇ ಶುಭಕಾರ್ಯಕ್ಕೆ ಮತ್ತು ಕುಲಸ್ಥರ ಯಾವುದೇ ಕಾರ್ಯಕ್ರಮಗಳಿಗೂ ಆಹ್ವಾನ ನೀಡದಂತೆ ಸ್ಥಳೀಯ ಪಂಚಾಯಿತಿದಾರರು ತಾಕೀತು ಮಾಡಿದ್ದಾರೆ.
ಬಹಿಷ್ಕಾರಕ್ಕೊಳಗಾದ ಚಿಕ್ಕಮ್ಮನ ಕುಟುಂಬದ ಹೆಣ್ಣು ಮಕ್ಕಳಿಗೂ ತವರಿಗೆ ಹೋಗದಂತೆ ಕುಲಸ್ಥರು ತೀರ್ಮಾನ ಮಾಡಿದ್ದರು. ಆದರೆ ಗಂಡನ ಮನೆಯಿಂದ ತಾಯಿ ಮನೆಗೆ ಬರಬೇಕೆಂಬ ಇಚ್ಛೆಯಿದ್ದರೂ ಹೋಗಲಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಆದರೆ ತವರಿಗೆ ಬಂದ ಹೆಣ್ಣು ಮಕ್ಕಳು ಕೂಡ ಬಹಿಷ್ಕಾರದಿಂದ ಮತ್ತೆ ಗಂಡನ ಮನೆಗೆ ಹಿಂತಿರುಗಿ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮ್ಮನ ಮನೆಗೆ ಯಾರಾದರು ಕುಲಸ್ಥರು ಬಂದರೂ ಅವರಿಗೂ ಸಾಮಾಜಿಕ ಬಹಿಷ್ಕಾರ ಹಾಕುತ್ತೇವೆಂದು ನ್ಯಾಯಸ್ಥರು ಹೇಳುತ್ತಿರುವುದರಿಂದ ಯಾರೊಬ್ಬರು ಇವರೊಂದಿಗೆ ಒಡನಾಟವಿಟ್ಟುಕೊಳ್ಳಲು ಹಿಂಜರಿಯುತ್ತಿದ್ದಾರೆ. ಹಲವಾರು ಬಾರಿ ದೂರು ನೀಡಿದ್ದರೂ ಚಿಕ್ಕಮ್ಮನ ಕುಟುಂಬಕ್ಕೆ ಹಾಕಿರುವ ಬಹಿಷ್ಕಾರ ತೆರವುಗೊಂಡಿಲ್ಲ. ಕೂಲಿ ನಾಲಿ ಮಾಡಿ ಜೀವನ ಸಾಗಿಸುವ ಚಿಕ್ಕಮ್ಮನ ಕುಟುಂಬದ ಸದಸ್ಯರು ಬಹಿಷ್ಕಾರದ ಶಿಕ್ಷೆಯಿಂದ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ.
41 ಗ್ರಾಮಗಳ ಸಮುದಾಯದ ಮುಖಂಡರುಗಳ ಸಮ್ಮುಖದಲ್ಲಿ ಪಂಚಾಯ್ತಿ ನಡೆಸಿ ದಂಡ ಹಾಕಿದ್ದಲ್ಲದೇ ಬಹಿಷ್ಕಾರ ಹಾಕಿರುವುದು ಕೆಟ್ಟ ಬೆಳವಣಿಗೆಯಾಗಿದೆ ಎಂದು ದಲಿತ ಮುಖಂಡ ಕಲ್ಕೆರೆ ಶಿವಣ್ಣ ಹೇಳಿದ್ದಾರೆ. ಸಮಾಜದಲ್ಲಿರುವ ಇಂತಹ ಕಟ್ಟುಪಾಡುಗಳ ಮೂಲಕ ಶೋಷಣೆ ದೌರ್ಜನ್ಯ ನಡೆಸುವ ಮಂದಿಗೆ ತಕ್ಕ ಶಿಕ್ಷೆಯಾದಾಗ ಮಾತ್ರ ಸಮಾಜದಲ್ಲಿ ಜೀವಂತವಾಗಿರುವ ಇಂತಹ ಅನಿಷ್ಟ ಸಮಾಜಿಕ ಬಹಿಷ್ಕಾರ ಪದ್ದತಿಗಳಿಗೆ ಕಡಿವಾಣ ಹಾಕಲು ಸಾಧ್ಯವೆಂಬುದು ಶಿವಣ್ಣ ಅವರ ಸ್ಪಷ್ಟ ಅಭಿಪ್ರಾಯ.
ಸಮಾಜದಲ್ಲಿ ಸಮಾನತೆ ತಂದು ಜಾತಿ ಎಂಬ ಅನಿಷ್ಟ ಪದ್ದತಿಯನ್ನ ಹೋಗಲಾಡಿಸಬೇಕೆಂದು ಸರ್ಕಾರ ಹಲವಾರು ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದರೂ ಸಾಮಾಜಿಕ ಬಹಿಷ್ಕಾರ ಪದ್ದತಿ ಇನ್ನೂ ಜೀವಂತವಾಗಿರುವುದಕ್ಕೆ ಈ ಘಟನೆಯೇ ಸಾಕ್ಷಿ. ತಕ್ಷಣವೇ ತಾಲ್ಲೂಕ್ ಆಡಳಿತ ಮತ್ತು ಪೋಲೀಸ್ ಇಲಾಖೆ ಬಹಿಷ್ಕಾರಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಒದಗಿಸಕೊಡಬೇದಾದ ಅನಿವಾರ್ಯತೆಇದೆ.












Click it and Unblock the Notifications