ಸಂತ್ರಸ್ತರ ನೆರವಿಗೆ ಸಿಎಂ ವಿನೂತನ ಚಿಂತನೆ

ಲಕ್ಷಾಂತರ ಕುಟುಂಬಗಳಿಗೆ ಶಾಶ್ವತ ನೆಲೆಕಲ್ಪಿಸುವುದರ ಜೊತೆಗೆ ಭಾರಿ ಪ್ರಮಾಣದಲ್ಲಿ ಹಾನಿಯುಂಟಾಗಿರುವ ಸಾರ್ವಜನಿಕ ಆಸ್ತಿಗಳ ಪುನರ್ನಿರ್ಮಾಣ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಈ ಸವಾಲನ್ನು ಸ್ವೀಕರಿಸಲು ಸರ್ಕಾರ ಸಮರೋಪದಿಯಲ್ಲಿ ಪರಿಹಾರ ವಿತರಣೆ ಮತ್ತು ಪುನರ್ನಿರ್ಮಾಣದ ಕಾರ್ಯದಲ್ಲಿ ತೊಡಗಿದೆ.
ಈ ಕಾಯಕದಲ್ಲಿ ಕೇಂದ್ರ ಸರ್ಕಾರದ ನೆರವು ಮತ್ತು ರಾಜ್ಯಸರ್ಕಾರದ ಸಂಪನ್ಮೂಲಗಳ ನೆರವು ಬಳಸಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಉದ್ದಿಮೆಗಳು ಸ್ವಯಂ ಸೇವಾ ಸಂಸ್ಥೆಗಳು, ಮಠ ಮಾನ್ಯಗಳು ಸರ್ಕಾರಿ ಅಧಿಕಾರಿ ಮತ್ತು ನೌಕರರು, ನಿವೃತ್ತ ನೌಕರರು ಒಟ್ಟಾರೆ ಸಾರ್ವಜನಿಕರು ಪರಿಹಾರ ಮತ್ತು ಪುನರ್ವಸತಿಗಾಗಿ ನೀಡಿರುವ ನೆರವು ಅನನ್ಯ ಮತ್ತು ಅಪೂರ್ವ.
ನೆರೆ ಸಂತ್ರಸ್ತರಿಗೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಆಸರೆ ಕಾರ್ಯಕ್ರಮ ಈಗಾಗಲೇ ಚಾಲನೆಗೊಂಡಿದೆ. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಚೈತನ್ಯತುಂಬಲು ಮತ್ತು ನೆರೆಪೀಡಿತ ಗ್ರಾಮಗಳ ಆರೋಗ್ಯ ಹಾಗೂ ನೈರ್ಮಲ್ಯ ಸುಧಾರಿಸಲು ನವೆಂಬರ್ 7 ರಿಂದ 11 ರವರೆಗೆ ಸತತ 5 ದಿನಗಳ ಕಾಲ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ನೆರೆಪೀಡಿತ ಹಳ್ಳಿಗಳಲ್ಲಿ ಪ್ರವಾಸ ಪಾದಯಾತ್ರೆ ಶ್ರಮದಾನ ಬಹಿರಂಗ ಸಭೆ ಮತ್ತು ಗ್ರಾಮವಾಸ್ತವ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಇದು ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಾರ್ಯದಲ್ಲಿ ಸ್ಥಳೀಯರನ್ನು ಒಳಗೊಂಡ ಕಾರ್ಯಕ್ರಮವಾಗಿದ್ದು ಮುಖ್ಯಮಂತ್ರಿಗಳ ಜೊತೆ ಸಚಿವರು, ಸಂಸದರು, ಶಾಸಕರು, ದಾನಿಗಳು, ಮಠಮಾನ್ಯಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಯಚೂರು ಜಿಲ್ಲೆಯ ಬಿಚ್ಚಾಲೆ ಗ್ರಾಮದಲ್ಲಿ ಈ ಕಾರ್ಯಕ್ರಮವು ಆರಂಭಗೊಳ್ಳಲಿದ್ದು ಆ ನಂತರ ಗುಲ್ಬರ್ಗಾ, ಬಿಜಾಪುರ, ಧಾರವಾಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications