ನ.3 ಕ್ಕೆ ವೈದ್ಯರ ಸಾಮೂಹಿಕ ರಾಜೀನಾಮೆ
ಭಾನುವಾರ ನಗರದಲ್ಲಿ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಾನವೀಯತೆ ನೆಲೆಯಲ್ಲಿ ನೆರೆ ಸಂತ್ರಸ್ಥರಿಗೆ ಸಂಘದ ಬಹುತೇಕ ವೈದ್ಯರು ಆರೋಗ್ಯ ಸೇವೆ ಒದಗಿಸಿದ್ದಾರೆ. ಸರಕಾರ ಈಗ ನೆರೆ ನೆಪವಾಗಿಟ್ಟುಕೊಂಡು ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿರುವ ಸಾಧ್ಯತೆ ಇದೆ. ಹೀಗಾಗಿ ನಮ್ಮ ನಿಲುವುಗಳನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ನವೆಂಬರ್ 3 ರಂದು ಬೆಳಗ್ಗೆ ಆನಂದರಾವ್ ವೃತ್ತದಲ್ಲಿರುವ ಆರೋಗ್ಯ ಇಲಾಖೆ ಆಯುಕ್ತರ ಕಚೇರಿಗೆ ತೆರಳಿ ಸಾಮೂಹಿಕ ರಾಜೀನಾಮೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್ ಎಸ್ ರವೀಂದ್ರ ಹೇಳಿದ್ದಾರೆ.
ಅಕ್ಟೋಬರ್ 27 ರಂದು ಸಂಜೆ 4 ಗಂಟೆಗೆ ಬೇಡಿಕೆಗಳ ಬಗ್ಗೆ ಚರ್ಚಿಸಲು ಸರಕಾರದ ಮುಖ್ಯ ಕಾರ್ಯದರ್ಶಿ ಸಭೆ ಕರೆದಿದ್ದಾರೆ. ಅ. 28 ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಈ ಸಭೆಗಳಲ್ಲಿ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗದಿದ್ದರೆ, ವೈದ್ಯರು ಸರಕಾರಿ ಸೇವೆಯಲ್ಲಿ ಮುಂದುವರಿಯುವುದಿಲ್ಲ ಎಂದು ರವೀಂದ್ರ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)