ಪೊಲೀಸ್ ಗುಂಡಿಗೆ ಕುಖ್ಯಾತ ದರೋಡೆಕೋರ ಬಲಿ
ಮಂಗಳೂರು, ಅ.10: ಬಜ್ಪೆ ಬಳಿಯ ಪಡವಿನಂಗಡಿಯಲ್ಲಿ ಪೊಲೀಸರ ಎನ್ ಕೌಂಟರ್ ಗೆ ಕುಖ್ಯಾತ ಅಂತಾರಾಜ್ಯ ದರೋಡೆಕೋರನೊಬ್ಬ ಬಲಿಯಾಗಿದ್ದಾನೆ. ದರೋಡೆಕೋರರ ತಂಡದ ಉಳಿದ ನಾಲ್ಕು ಮಂದಿಯನ್ನು ಪೊಲೀಸರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕ ಗೋಪಾಲ್ ಹೊಸೂರ್ ಮಾಹಿತಿ ನೀಡಿದರು. ದರೋಡೆಕೋರರ ವಾಹನ ಪಡವಿನಂಗಡಿಯಿಂದ ಉಳ್ಳಾಲ ಕಡೆಗೆ ಹೊರಟಿತ್ತು. ಪೊಲೀಸರನ್ನು ಕಂಡ ಕೂಡಲೆ ದರೋಡೆಕೋರರು ರಿವಾಲ್ವರ್ ನಿಂದ ಪೊಲೀಸರ ಕಡೆಗೆ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ದರೋಡೆಕೋರರ ಕಡೆಗೆ ಗುಂಡು ದಾಳಿ ನಡೆಸಿದರು, ಪರಿಣಾಮ ದರೋಡೆಕೋರನೊಬ್ಬ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.
ವ್ಯಾಪಾರಿಯೊಬ್ಬನಿಂದ ರು.5 ಕೋಟಿಯನ್ನು ಲೂಟಿ ಮಾಡಲು ಬಂದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಸಿಕ್ಕಿಬಿದ್ದಿರುವ ದರೋಡೆಕೋರರು ಬಾಯ್ಬಿಟ್ಟಿದ್ದಾರೆ. ಪಡವಿನಂಗಡಿಯಲ್ಲಿ ಇವರು ಬಾಡಿಗೆ ಮನೆಯಲ್ಲಿ ತಲೆಮರೆಸಿಕೊಂಡಿದ್ದರು ಎಂದು ಗೋಪಾಲ್ ಹೊಸೂರ್ ವಿವರ ನೀಡಿದ್ದಾರೆ.
ಮೃತಪಟ್ಟ ದರೋಡೆಕೋರರನ್ನು ಬೆಂಗಳೂರಿನ ಸರ್ದಾರ್ ಎಂದು ಗುರುತಿಸಲಾಗಿದೆ. ಈತ 45ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಇತ್ತೀಚೆಗಷ್ಟೆ ಬೆಳಗಾವಿಯ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ. ಉಳಿದ ನಾಲ್ಕು ಮಂದಿಯನ್ನು ಪ್ರವೀಣ್, ಶಂಕರ್, ಸಂಜಯ್ ಮತ್ತು ಮಲ್ಲಿಕ್ ಎಂದು ಗುರುತಿಸಲಾಗಿದೆ. ಇವರೆಲ್ಲಾ 25ರಿಂದ 35ರ ವಯೋಮಾನದವರು.
(ದಟ್ಸ್ ಕನ್ನಡ ವಾರ್ತೆ)