ಪ್ರವಾಹ ಪೀಡಿತರ ಕಣ್ಣೀರಿಗೆ ಕೇಂದ್ರದ ತಣ್ಣೀರು
ನವದೆಹಲಿ, ಅ. 7 : ನೆರೆ ಕಾರ್ಯಕ್ಕೆ ರಾಜ್ಯ ಸರಕಾರ ತುರ್ತಾಗಿ ವಿಪತ್ತು ಪರಿಹಾರ ನಿಧಿಯ ಹಣ ಬಳಸಿಕೊಳ್ಳಬೇಕು ಎನ್ನುವ ಮೂಲಕ ಗೃಹ ಸಚಿವ ಪಿ ಚಿದಂಬರಂ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಿದ್ದಾರೆ.
ವಿಪತ್ತು ಪರಿಹಾರ ನಿಧಿಯ ಶೇ. 75ರಷ್ಟು ಹಣ ಖರ್ಚಾಗುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಈಗಾಗಲೇ ಬರ ನೆರೆಯಿಂದಾದ ಹಾನಿಯಿಂದ ಚೇತರಿಸಿಕೊಳ್ಳುವ ತಕ್ಷಣ 10 ಸಾವಿರ ಕೋಟಿ ರುಪಾಯಿಗಳನ್ನು ನೀಡುವಂತೆ ಸೋಮವಾರವಷ್ಟೇ ಪ್ರಧಾನಿಗೆ ಮುಖ್ಯಮಂತ್ರಿ ಪತ್ರ ಬರೆಯುವ ಮೂಲಕ ವಿನಂತಿಸಿದ್ದರು.
ಆದರೆ, ವೈಮಾನಿಕ ಸಮೀಕ್ಷೆ ಮೂಲಕ ನೆರೆ ಹಾನಿ ನೋಡಿದ ಚಿದಂಬರಂ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅಪಾರ ಹಾನಿಯಾಗಿದೆ. ಜನರಿಗಾದ ಕಷ್ಟ ನಿವಾರಿಸುವ ಅಗತ್ಯವಿದೆ. ಪರಿಹಾರ ಕಾರ್ಯಕ್ಕೆ ರಾಜ್ಯಗಳು ಚಿಂತೆ ಮಾಡದೆ ಸೂಕ್ತ ಪರಿಹಾರ ಕೈಗೊಳ್ಳಬೇಕು ಎಂದು ಮೊಸಳೆ ಕಣ್ಣೀರು ಸುರಿಸಿದ್ದರು. ಪರಿಹಾರ ಕಾರ್ಯಕ್ಕೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ ಅಥವಾ ಬಿಡುಗಡೆ ಮಾಡುವ ಯಾವುದೇ ಭರವಸೆಯನ್ನೂ ನೀಡಿಲ್ಲ.
(ಏಜನ್ಸೀಸ್)