ಆರ್ ಟಿಪಿಎಸ್ 4 ಸ್ಥಗಿತ : ಲೋಡ್ ಶೆಡ್ಡಿಂಗ್ ?
ರಾಯಚೂರು, ಅ. 7 : ಭಾರಿ ಮಳೆ ರಾಜ್ಯದ ವಿದ್ಯುತ್ ಉತ್ಪಾದನೆ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ರಾಯಚೂರಿನ ಥರ್ಮಲ್ ಘಟಕದಲ್ಲಿ ದಾಸ್ತಾನು ಮಾಡಿದ್ದ ಕಲ್ಲಿದ್ದಲು ನೀರಿನಿಂದ ತೊಯ್ದು ಬಳಸಲು ಸಾಧ್ಯವಾಗದಂತೆ ಆಗಿದೆ. ಇದರಿಂದ ನಾಲ್ಕು ಘಟಕಗಳು ಉತ್ಪಾದನೆ ನಿಲ್ಲಿಸಿದ್ದು, ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆಡೆ ವಿದ್ಯುತ್ ಕಡಿತಕ್ಕೆ ಕೆಪಿಟಿಸಿಎಲ್ ನಿರ್ಧರಿಸಿದೆ.
ಪ್ರವಾಹದಿಂದ ರೈಲ್ವೆ ಹಳಿ ಕೊಚ್ಚಿ ಹೋಗಿರುವುದರಿಂದ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ತನಕ ಹೊಸ ಕಲ್ಲಿದ್ದಲು ಕರಗಿಸುವುದು ಕಷ್ಟ. ಹೀಗಾಗಿ ಪರಿಸ್ಥಿತಿ ನಿಭಾಯಿಸಲು ಎಲ್ಲ ಜಲ ವಿದ್ಯುತ್ ಘಟಕಗಳಲ್ಲೂ ಪೂರ್ಣ ಪ್ರಮಾಣದ ಉತ್ಪಾದನೆಗೆ ಸೂಚನೆ ನೀಡಲಾಗಿದೆ. ಲಿಂಗನಮಕ್ಕಿ ಸೇರಿದಂತೆ ಎಲ್ಲ ಜಲಾಶಯಗಳಿಗೆ ಭಾರಿ ಒಳಹರಿವು ಇರುವುದರಿಂದ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಗೆ ಇಂಧನ ಸಚಿವ ಕೆಎಸ್ ಈಶ್ವರಪ್ಪ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಖುದ್ದು ಪರಿಶೀಲನೆಗೆ ಅವರು ಬುಧವಾರ ರಾಯಚೂರು ತೆರಳುತ್ತಿದ್ದಾರೆ.
ವರುಣನ ರುದ್ರನರ್ತನದಿಂದ ಸಾವಿರಾರು ವಿದ್ಯುತ್ ಕಂಬಗಳು ಉರುಳಿದ್ದು, ಟ್ರಾನ್ಸ್ ಫಾರ್ಮರ್ ಮತ್ತು ವಿದ್ಯುತ್ ಉಪಕೇಂದ್ರಗಳು ಕೆಟ್ಟಿವೆ. ಇಲಾಖೆಗೆ ಆದ ನಷ್ಟ ಅಂದಾಜು ಇನ್ನೂ ಆಗಬೇಕಿದೆ. ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆದಿದ್ದು, ಉತ್ತರ ಕರ್ನಾಟಕದ ನೂರಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂಜು ಕೆಪಿಟಿಸಿಎಲ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)