ಸಂಧಾನಸಭೆ ವಿಫಲ. ವೈದ್ಯರ ಸಾಮೂಹಿಕ ರಾಜೀನಾಮೆ

ವೈದ್ಯರ ಬೇಡಿಕೆಗಳಾದ ವೇತನ, ಇತರೆ ಭತ್ಯೆಗಳ ಹೆಚ್ಚಳ, ಗುತ್ತಿಗೆ ಅವಧಿಯನ್ನು ಉನ್ನತ ವ್ಯಾಸಂಗಕ್ಕೆ ಪರಿಗಣಿಸಬಾರದು, ಕಾಲಮೀತಿ ಭಡ್ತಿ ನೀಡುವುದು. ಖಾಲಿ ಇರುವ ವೈದ್ಯ ಹುದ್ದೆಗಳ ಭರ್ತಿ, ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಮೂಲಭೂತ ಸೌಕರ್ಯಗಳು ನೀಡಬೇಕು ಎನ್ನುವುದು ವೈದ್ಯರ ಒತ್ತಾಯವಾಗಿದೆ.
ಇಂದು ನಗರದ ಅನಂದರಾವ್ ವೃತ್ತದಲ್ಲಿರುವ ಆರೋಗ್ಯ ನಿರ್ದೇಶನಾಲಯಕ್ಕೆ ಸುಮಾರು 3500 ವೈದ್ಯರು ಆಗಮಿಸಿ ಸಾಮೂಹಿಕ ರಾಜೀನಾಮೆಗೆ ಜಮಾವಣೆಗೊಂಡರು. ಸರಕಾರದ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅವರು ವೈದ್ಯರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರಾದರೂ ಸಂಧಾನ ಸಭೆ ಪ್ರಯೊಜನವಾಗಲಿಲ್ಲ. ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಸಲು ಸರಕಾರ ವಿಫಲವಾಗಿದೆ. ಆದ್ದರಿಂದ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ. ಆದರೆ, ಅಕ್ಟೋಬರ್ 14ರ ವರೆಗೆ ಸೇವೆ ಸಲ್ಲಿಸುತ್ತೇವೆ ಎಂದು ವೈದ್ಯರ ಸಂಘದ ಅಧ್ಯಕ್ಷ ರವೀಂದ್ರ ಸ್ಪಷ್ಟಪಡಿಸಿದ್ದಾರೆ.
ಸುತ್ತೂರುಮಠದಲ್ಲಿ ಬಿಜೆಪಿ ಸಹಚಿಂತನೆಯಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅಕ್ಟೋಬರ್ 4 ರಂದು ವೈದ್ಯರ ಸಂಘದ ಪದಾಧಿಕಾರಿಗಳ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಆರೋಗ್ಯ ಇಲಾಖೆ ಜನಸಾಮಾನ್ಯರಿಗೆ ತೀರ ಅವಶ್ಯಕವಾಗಿರುವುದು. ಅದ್ದರಿಂದ ವೈದ್ಯರು ರಾಜೀನಾಮೆ ಕೈಬಿಟ್ಟು ಸೇವೆಗೆ ಹಾಜರಾಗಬೇಕು ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications