ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಆಯ್ಕೆ ಮಾಡಿದ್ದು ಮತದಾರರ ತಪ್ಪು !

By *ಮೃತ್ಯುಂಜಯ ಕಲ್ಮಠ
|
Google Oneindia Kannada News

Yeddyuappa
ಪುತ್ರ ವಾತ್ಸಲ್ಯ ಬಿಡಿ, ನಾವು ನಿಮ್ಮ ಮಕ್ಕಳಿದ್ದಂತೆ. ಹಿರಿಯರಿದ್ದೀರಾ ರಾಜ್ಯದ ಸಮಸ್ಯೆಗಳ ಬಗ್ಗೆ ನೋವಿದ್ದರೆ ಕರೆದು ಮಾರ್ಗದರ್ಶನ ಮಾಡಿ. ಅಗತ್ಯಬಿದ್ದರೆ ತಿಂಗಳಿಗೊಮ್ಮೆ ನಿಮ್ಮ ಮನೆಗೆ ಭೇಟಿ ನೀಡುತ್ತೇನೆ. ಯಡಿಯೂರಪ್ಪ

ಅಯ್ಯೋ ರಾಮ ರಾಮ, ಇದು ಒಂದು ಸರಕಾರ ಏನ್ರೀ ? ಕೋರ್ಟ್ ಆರ್ಡರ್ ಇದೆ ಅನ್ನೋದು ಗೊತ್ತಿಲ್ವೇ. ಆ ಡಿಸಿ ಎಸ್ಪಿಗಳಿಗೆ ಬುದ್ಧಿ ಬೇಡ್ವೆ ? ಅವರಾದ್ರೂ ಕೋರ್ಟ್ ಬಗ್ಗೆ ಓದಿ ತಿಳ್ಕೊಬಾರ್ದಾ. ದತ್ತ ಪೀಠದಲ್ಲಿ ಪೂಜೆ ನಡೆಸಿರುವುದು ಅಕ್ಷಮ್ಯ. ದೇವೇಗೌಡ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿ ತಮ್ಮ ಹಕ್ಕನ್ನು ಚಲಾಯಿಸಿ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ. ದೇಶದ ನಂಬರ್ ಮುಖ್ಯಮಂತ್ರಿಯಾಗಬೇಕು ಎಂಬ ಕಾರಣದಿಂದ ಇಂಗ್ಲಿಷ್ ವಾರಪತ್ರಿಕೆಗೆ ಆಮಿಷವೊಡ್ಡಿದ್ದಾರೆ. ಚೀನಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜ್ಞಾನೋದಯವಾಗಿದೆ. ಕುಮಾರಸ್ವಾಮಿ

ಅಪ್ಪ ಮಕ್ಕಳು ವಿನಾಕಾರಣ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಮಾಜಿ ಪ್ರಧಾನಿಯಾಗಿ ಹಾಲಿ ಪ್ರಧಾನಿಯೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು. ಅದು ಬಿಟ್ಟು ಅಪ್ಪಮಕ್ಕಳು ಮೊಸಳೆ ಕಣ್ಣೀರು ಸುರಿಸುತ್ತಿರುವುದರ ಹಿಂದಿನ ಉದ್ದೇಶವೇನು. ರೈತರ ಬಗ್ಗೆ ಕಾಳಜಿ ಇದ್ದವರು ಅತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಬದಲಾಗಿ ಅತ್ಮಹತ್ಯೆಗೆ ಪ್ರೇರಣೆ ನೀಡುವುದು ಸರಿಯೇ ? ಯಡಿಯೂರಪ್ಪ

ಸರಕಾರವನ್ನು ಅಭದ್ರಗೊಳಿಸಲು ಕಾಂಗ್ರೆಸ್ ಪಕ್ಷ ಸಂಚು ರೂಪಿಸಿದೆ ಎಂದು ಹೇಳಿಕೆ ನೀಡಿರುವ ಯಡಿಯೂರಪ್ಪ ವಿರುದ್ಧ ಮಾನನಷ್ಟ ಹೂಡುವ ಚಿಂತನೆ ನಡೆಸಲಾಗಿದೆ. ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಕೆಪಿಪಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಮತ್ತು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಎಚ್ಚರಿಕೆ.

ನೀವೇನೆ ಹೇಳಿ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಯಾಕಾದರೂ ಅಧಿಕಾರಕ್ಕೆ ಬಂತು ಅಂತ ಅನಿಸಲ್ವಾ. ಪೇಪರ್ ಕೈಗೆತ್ತಿಕೊಂಡರೆ ಸಾಕು ಕಣ್ಣಿಗೆ ರಾಚುವುದು ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ದೇಶಪಾಂಡೆ, ಸಿದ್ಧರಾಮಯ್ಯ, ಉಗ್ರಪ್ಪ ಅವರ ಹೇಳಿಕೆಗಳೆ. ಅವು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹೇಳಿಕೆಗಳಾ ? ಸರಕಾರಕ್ಕೆ ಸಲಹೆ ಸೂಚನೆ ಕೊಡುವಂತ ಹೇಳಿಕೆಗಳಾ ? ಮುಖ್ಯಮಂತ್ರಿ ಯಡಿಯೂರಪ್ಪ ಅವರ ತಪ್ಪು ನಿರ್ಧಾರಗಳನ್ನು ಎತ್ತಿ ತೋರಿಸುವಂತ ಹೇಳಿಕೆಗಳಾ ? ಇವು ಯಾವುದು ಅಲ್ಲ. ಪುಗಸೆಟ್ಟೆ ಸಲಹೆ, ಸೂಚನೆ ಕೊಡುವಂತ ಹರಕತ್ತು ಅವರಿಗಿದೆಯೇ ? ಅವರದೇನಿದ್ದರೂ ಯಥಾ ಪ್ರಕಾರ ಬಿಜೆಪಿ ಕೋಮುವಾದಿ ಪಕ್ಷ. ರಾಜ್ಯದಲ್ಲಿ ಅಲ್ಪಸಂಖ್ಯಾತರು ಭಯದಲ್ಲಿ ಜೀವನ ಮಾಡುತ್ತಿದ್ದಾರೆ ಎಂಬಂತಹ ಹೇಳಿಕೆಗಳೆ. ಹಾಗಂತ ಪ್ರತಿಪಕ್ಷಗಳು ಸುಮ್ಮನೆ ಕೂರಬೇಕು ಅಂತ ಹೇಳುತ್ತಿಲ್ಲ.

ಅದನ್ನು ತಡೆಯುವಂತ ಸಲಹೆಗಳನ್ನು ತಮ್ಮ ಅಪಾರ ಅನುಭವದಿಂದ ನೀಡಬಹುದಲ್ಲ. ಯಡಿಯೂರಪ್ಪ ಹೇಳಿದ ಹಾಗೆ ದೇವೇಗೌಡರು ಮಾರ್ಗದರ್ಶನ ನೀಡುವುದಾದರೆ ಅವರ ಮನೆಗೆ ತೆರಲಿ ಸಲಹೆ ಪಡೆದುಕೊಳ್ಳಲು ಸಿದ್ಧ ಎಂದಿದ್ದಾರೆ. ರಾಜ್ಯ ಮುಖ್ಯಮಂತ್ರಿ ಆಗಿರುವ ವ್ಯಕ್ತಿ ನಿಮ್ಮ ಮಗನಿದ್ದ ಹಾಗೆ, ನಿಮ್ಮ ಸಲಹೆಗಳನ್ನು ಶಿರಸಾವಹಿಸಿ ಪಾಲಿಸುವೆ ಎಂದು ಅಂಗಲಾಚಿದರೂ ಸುಖಾಸುಮ್ಮನೆ ಹುಯಿಲೆಬ್ಬಿಸುವ ಕೆಲಸ ಒಬ್ಬ ಹಿರಿಯ ರಾಜಕಾರಣಿ ಮಾಡುವ ಕೆಲಸವೇ ?

ಇತ್ತೀಚೆಗೆ ಬೆಂಗಳೂರಿನ ಹೆಬ್ಬಗೋಡಿ ಚರ್ಚ್ ದಾಳಿಯ ನಂತರವಂತೂ ಸರಕಾರ ಬುಡಕ್ಕೆ ಕೈಹಾಕುವ ಕೆಲಸ ನಡೆಯಿತು, ಅದು ಇನ್ನೂ ಮುಂದುವರೆದಿದೆ. ದೇವೇಗೌಡರು ಮಾಜಿ ಪ್ರಧಾನಿ ರಾಜ್ಯ ರಾಜಕಾರಣದ ಅನೇಕ ಮಜಲುಗಳನ್ನು ನೋಡಿದ, ವಿವಿಧ ನಾಯಕರ ಜೊತೆಗೆ ಕೆಲಸ ಮಾಡಿ ಬ್ರಹ್ಮಾಂಡ ಅನುಭವವುಳ್ಳ ನಾಯಕರು. ಅವರೆ ಸರಕಾರದ ವಿರುದ್ಧ ಜನ ರೊಚ್ಚಿಗೇಳುವಂತ ಹೇಳಿಕೆ ನೀಡುವುದು ಎಷ್ಟು ಸರಿ ?

ಸರಕಾರ ಅಧಿಕಾರಕ್ಕೆ ಬಂದು ಕೆಲವೆ ತಿಂಗಳಲ್ಲಿ ನಡೆಸಿದ್ದ ಶೀಡ್ಲಘಟ್ಟದ ಬಳಿಯ ಭೂಹಗರಣ, ಕಲ್ಲಿದ್ದಲು ಹಗರಣಗಳ, ಪಡಿತರ ಚೀಟಿ ಅವ್ಯವಹಾರ ಸೇರಿದಂತೆ ಅನೇಕ ಹಗರಣಗಳನ್ನು ಬಯಲು ಮಾಡಿದ ಕೀರ್ತಿ ಜೆಡಿಎಸ್ ಗೆ ಸಲ್ಲಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಭೂಹಗರಣ ಬಯಲು ಮಾಡಿದಾಗ ಅನೇಕ ಜನ ಜೆಡಿಎಸ್ ಕಾರ್ಯವನ್ನು ಶ್ಲಾಘಿಸಿದ್ದು ಇದೆ. ಈ ವಿಷಯದಲ್ಲಿ ಕಾಂಗ್ರೆಸ್ ಬರೀ ಟೀಕೆಗೆ ಮಾತ್ರ ಸೀಮಿತವಾಗಿರುವ ಪಕ್ಷ. ಉಗ್ರಪ್ಪ ಅವರ ಬಾಯಿಯಂತೂ ಬೊಂಬಾಯಿ. ಯಡಿಯೂರಪ್ಪ ಕುಂತ್ರು ತಪ್ಪು, ನಿಂತ್ರೂ ತಪ್ಪು. ಟೀಕೆ ಮಾಡುವುದೇ ಅವರ ಏಕೈಕ ಕೆಲಸವಾಗಿದೆ.

ಈ ಎಲ್ಲದರ ಪರಿಣಾಮ ಸರಕಾರ ಅಭಿವೃದ್ದಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಸಾಧ್ಯವಾಗುತ್ತಿಲ್ಲ ಎನ್ನುವುದು ಸತ್ಯ. ಸರಕಾರ ಉಳಿಸಿಕೊಂಡು ಹೋಗುವುದು ಯಡಿಯೂರಪ್ಪ ಅವರಿಗೆ ದೊಡ್ಡ ಪ್ರಶ್ನೆಯಾಗಿದೆ. ಇಂತಹ ವೇಳೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ರೂಪಿಸುವುದಕ್ಕೆ ಅವರಿಗೆಲ್ಲಿದೆ ಸಮಯ. ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಬೊಬ್ಬೆ ಹಾಕುವ ಬದಲು ಬೊಬ್ಬೆ ಹಾಕುವ ಮಂದಿ ಸ್ವಲ್ಪ ಚಿಂತನೆ ನಡೆಸುವುದು ಬೇಡವೇ. ಬಿಜೆಪಿ ಸರಕಾರ ಮತದಾರರಿಂದ ಆಯ್ಕೆಯಾಗಿರುವ ಸರಕಾರ. ಐದು ವರ್ಷ ಅದನ್ನು ತೆಗೆದುಹಾಕುವುದು ಯಾರಿಂದಲೂ ಸಾಧ್ಯವಿಲ್ಲ. ಯಡಿಯೂರಪ್ಪ ಅವರನ್ನು ಆ ಸ್ಥಾನದಿಂದ ಕೆಳಗಿಸಬಹುದು. ಆದರೆ, ಬಿಜೆಪಿ ಸರಕಾರ ಕಿತ್ತು ಹಾಕುವುದು ಸಾಧ್ಯವೇ ? ಮುಂದಾದರೂ ಪ್ರತಿಪಕ್ಷಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಅಲ್ಲವೇ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X