ಕಲ್ಲಿದ್ದಲು ಹಗರಣದ ತನಿಖೆ : ಯಡಿಯೂರಪ್ಪ
ಕಳೆದ ಮೂರು ದಿನಗಳ ಕಾಲ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಕುರಿತು ನಡೆದ ವಿಶೇಷ ಅಧಿವೇಶನದ ಚರ್ಚೆ ಬಳಿಕ ಅವರು ಸರಕಾರದ ಪರವಾಗಿ ಉತ್ತರ ನೀಡಿದರು. ತಮ್ಮ ನೇತೃತ್ವದ ಬಿಜೆಪಿ ಸರಕಾರ ಆಸ್ತಿತ್ವಕ್ಕೆ ಬಂದ ಬಳಿಕ ಕೇಂದ್ರ ಸರಕಾರದ ಅನುಮತಿ ಮೇರೆಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗಿದೆ. ಆದರೆ, ಇದರಲ್ಲಿ ಹಗರಣ ನಡೆದಿದೆ ಎಂಬ ಆರೋಪವಿದೆ. ಆದ್ದರಿಂದ ಪ್ರಕರಣದ ಸಂಪೂರ್ಣ ತನಿಖೆಯನ್ನು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸಲಾಗುವುದು ಎಂದರು.
ಕಳೆದ ಬೇಸಿಗೆಯಲ್ಲಿ ವಿದ್ಯುತ್ ಕೊರತೆಯಿಂದ ರಾಜ್ಯ ತತ್ತರಿಸಿತ್ತು. ಈ ಹಿನ್ನೆಲೆಯಲ್ಲಿ 6 ಲಕ್ಷ ಟನ್ ಕಲ್ಲಿದ್ದಲು ಖರೀದಿಸಬೇಕಿದ್ದು, ಇದಕ್ಕಾಗಿ ನಿಯಮ ಬದ್ಧವಾಗಿ ಕೆಪಿಟಿಸಿಎಲ್ ನಿಂದ ಟೆಂಡರ್ ಕರೆಯಲಾಗಿತ್ತು. ನಿಯಮದಂತೆ ಟೆಂಡರ್ ಪ್ರಕ್ರಿಯೆ ಮುಗಿಸಿ ರಾಜ್ಯಕ್ಕೆ ಉಳಿತಾಯವಾಗುವ ನಿಟ್ಟಿನಲ್ಲಿ ಕಲ್ಲಿದ್ದಲು ಖರೀದಿಸಲಾಗಿದೆ. ಆದರೆ, 2002ರ ನಂತರ ಕಲ್ಲಿದ್ದಲು ಖರೀದಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿರುವುದು ಕಂಡುಬಂದಿದೆ. ಕಳೆದ ಏಳು ವರ್ಷಗಳಲ್ಲಿ ರಾಜ್ಯಕ್ಕೆ ಏಳು ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಇದರಿಂದಾಗಿ ತಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ 3500 ಕೋಟಿ ರುಪಾಯಿ ಹೆಚ್ಚುವರಿ ಹೊರೆಬಿದ್ದಿದೆ. ಹೀಗಾಗಿ ಎಲ್ಲ ಅವ್ಯವಹಾರಗಳನ್ನು ತನಿಖೆ ನಡೆಸಲು ಸ್ವಯಂ ಪ್ರೇರಿತರಾಗಿ ನಿರ್ಧಾರ ಕೈಗೊಂಡಿದ್ದು, ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವುದಾಗಿ ಯಡಿಯೂರಪ್ಪ ಸದನಕ್ಕೆ ವಿವರಿಸಿದರು.
ಬಿಪಿಎಲ್ ಪಡಿತರ ಕಾರ್ಡ್ ಗಳಲ್ಲಿ ಅವ್ಯವಹಾರ ನಡೆದಿದೆ. ಅರ್ಹರಿಗೆ ಸಿಗಬೇಕಿದ್ದ ಪಡಿತರ ಪದಾರ್ಥಗಳು ಸಿಗದೆ ವಂಚನೆಯಾಗುತ್ತಿದೆ. ಇದಕ್ಕೆ ಅಧಿಕಾರಿಗಳೇ ಜವಾಬ್ದಾರಿ ಎಂದ ಮುಖ್ಯಮಂತ್ರಿ, ಬಿಪಿಎಲ್ ಪಡಿತರ ಕಾರ್ಡ್ ಗಳನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಲೋಕಾಯುಕ್ತರಿಂದ ತನಿಖೆ ನಡೆಸುವುದಾಗಿ ಪ್ರಕಟಿಸಿದರು.
(ದಟ್ಸ್ ಕನ್ನಡ ವಾರ್ತೆ)