ಎಚ್1ಎನ್1 ಸೋಂಕು ಹಬ್ಬಲು ಕಾರಣ ಯಾರು?

ಎಷ್ಟೇ ಎಚ್ಚರಿಕೆಗಳನ್ನು ಕೈಗೊಂಡಿದ್ದರೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇದಕ್ಕಾಗಿ ರಾಜ್ಯದ ಆರೋಗ್ಯಾಧಿಕಾರಿಗಳು ಐಟಿ ವೃತ್ತಿಪರರು ಮತ್ತು ಮೇರೆ ಮೀರಿರುವ ಮಾಲಿನ್ಯವೇ ಕಾರಣವೆಂದು ಬೆರಳೆತ್ತಿ ತೋರಿಸುತ್ತಿದ್ದಾರೆ.
ಎಚ್1ಎನ್1 ಹಬ್ಬುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಹತೋಟಿ ಮೀರಿರುವ ಮಾಲಿನ್ಯ ಮತ್ತು ಐಟಿ ತಂತ್ರಜ್ಞರು ಹೆಚ್ಚು ಪ್ರವಾಸ ಕೈಗೊಳ್ಳುತ್ತಿರುವುದು ನಿಯಂತ್ರಣವನ್ನು ಮತ್ತು ಸಂಕೀರ್ಣಗೊಳಿಸಿದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಆರ್ ಪೆರುಮಾಳ್ ಆರೋಪಿಸಿದ್ದಾರೆ.
ಹೆಚ್ಚಾಗಿ ಪ್ರವಾಸದಲ್ಲಿಯೇ ಇರುವ ಐಟಿ ತಂತ್ರಜ್ಞರು ಆರಂಭಿಕ ದಿನಗಳಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳದಿರುವುದೇ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ. ಇನ್ಫೋಸಿಸ್ ನಂಥ ಸಂಸ್ಥೆ ಕೂಡ ಆರೋಗ್ಯ ರಕ್ಷಣೆ ಕುರಿತಂತೆ ಸಾಕಷ್ಟು ಎಚ್ಚರಿಕೆ ವಹಿಸಿಲ್ಲ ಎಂದು ಪೆರುಮಾಳ್ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಮಾಲಿನ್ಯ ಹದ್ದುಮೀರಿದ್ದರಿಂದ ಜನರಲ್ಲಿ ಹೆಚ್ಚುಹೆಚ್ಚು ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ನ್ಯೂಮೋನಿಯಾ ಪ್ರಕರಣಗಳು ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಿವೆ. ಇವೆರಡು ತೊಂದರೆಗಳು ಎಚ್1ಎನ್1 ಸೋಂಕು ಕಾಣಿಸಿಕೊಳ್ಳಲು ಸಹಕಾರಿಯಾಗುತ್ತಿವೆ. ಬೆಂಗಳೂರಿನ ವಾಯುವಿನಲ್ಲಿ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಆಕ್ಸೈಡ್ ಪ್ರಮಾಣ ಹೆಚ್ಚಿದ್ದು, ವಾತಾವರಣ ವಿಪರೀತ ಕಲುಷಿತವಾಗುತ್ತಿದೆ. ಇದೇ ಉಸಿರಾಟದ ತೊಂದರೆ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಎಚ್1ಎನ್1 ಚಿಕಿತ್ಸೆಗಾಗಿ 90 ಖಾಸಗಿ ಆಸ್ಪತ್ರೆಗಳನ್ನು ನಿಯೋಜಿಸಲಾಗಿದೆ. ಸರಕಾರವೇ ಪ್ರತಿ ರೋಗಿಯ ಚಿಕಿತ್ಸೆಗಾಗಿ 2 ಸಾವಿರ ರು. ಮತ್ತು ಪರೀಕ್ಷೆಗಾಗಿ 3 ಸಾವಿರ ರು. ಖಾಸಗಿ ಆಸ್ಪತ್ರೆಗಳಿಗೆ ನೀಡುತ್ತಿದೆ ಎಂದು ಅವರು ತಿಳಿಸಿದರು.
(ಏಜೆನ್ಸೀಸ್)












Click it and Unblock the Notifications