ರಾಜ್ಯಪಾಲರ ಹೇಳಿಕೆಗೆ ಸಚಿವರ ತೀವ್ರ ಆಕ್ಷೇಪ
ರಾಜಭವನದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಾಜ್ಯಪಾಲರೊಬ್ಬರು ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಗ್ರಾಸವಾಗಿದೆ. ಅಲ್ಪಸಂಖ್ಯಾತರಿಗೆ ಬಿಜೆಪಿ ಸರಕಾರದಲ್ಲಿ ರಕ್ಷಣೆ ಇಲ್ಲ ಎಂಬ ರಾಜ್ಯಪಾಲರ ಹೇಳಿಕೆಗೆ ಸರಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ರಾಜ್ಯಪಾಲರು ಲಕ್ಷ್ಮಣ ರೇಖೆ ದಾಟುತ್ತಿದ್ದಾರೆ ಎಂಬರ್ಥದಲ್ಲಿ ಹರಿಹಾಯ್ದಿದೆ. ಇದರಿಂದ ಸಂವಿಧಾನಾತ್ಮಕ ಮಹತ್ವದ ಎರಡು ಸಂಸ್ಥೆಗಳು ಸಮರದ ಹಾದಿ ಹಿಡಿಯುತ್ತಿವೆ.
ರಾಜ್ಯಪಾಲರು ಸಿಬಿಐನಿಂದ ಆರೋಪ ಪಟ್ಟಿಗೆ ಒಳಗಾಗಿರುವ ಸಚಿವ ಸುಧಾಕರ್ ರಾಜೀನಾಮೆ ಪಡೆಯಬೇಕು. ಕೃಷ್ಣಯ್ಯ ಶೆಟ್ಟಿ ಕರ್ನಾಟಕ ಗೃಹ ಮಂಡಳಿಯಲ್ಲಿ ನಡೆಸಿರುವ ಅವ್ಯವಹಾರಗಳನ್ನು ಲೋಕಾಯುಕ್ತ ತನಿಖೆಗೆ ಸೂಚಿಸಿದ್ದರೂ ಅವರು ಸ್ಪಂದಿಸಿಲ್ಲ ಎಂಬ ಮಾತನ್ನೂ ಹೇಳಿದ್ದಾರೆ. ಇದರಿಂದ ರಾಜ್ಯಪಾಲರು ಅಸಮಾಧಾನಗೊಂಡು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರು ವಿರುದ್ಧ ಸಚಿವರಾದ ಸುರೇಶಕುಮಾರ್, ಬಿ ಎನ್ ಬಚ್ಚೇಗೌಡ, ಶಾಸಕ ಸಿಟಿ ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ವರ್ತನೆ ಹೀಗೆ ಮುಂದುವರೆದಲ್ಲಿ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)