ಅಡ್ವಾಣಿ ವಿರುದ್ಧ ಆರೆಸ್ಸೆಸ್ ಪ್ರಮುಖರ ವಾಗ್ದಾಳಿ
ಸಂಘಟನೆಯ ಮುಖವಾಣಿ 'ಪಾಂಚಜನ್ಯ' ದಲ್ಲಿನ ಲೇಖನವೊಂದರಲ್ಲಿ ಹಿರಿಯ ಮುಖಂಡ ದೇವೇಂದ್ರ ಸ್ವರೂಪ್ ತಮ್ಮ ಅಭಿಪ್ರಾಯ ಪ್ರಕಟಿಸುತ್ತಾ, ಆಡ್ವಾಣಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು ತಪ್ಪು ಎಂದು ಹೇಳಿದ್ದಾರೆ. ಇದರ ಲಾಭ ಪಡೆದ ಕಾಂಗ್ರೆಸ್ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಿ, "ಯುವಶಕ್ತಿ - ಹಳೆ ತಲೆಮಾರಿನ ಸಮರ" ಎಂದು ಮತದಾರನ ಮನವರಿಕೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ಸ್ವರೂಪ್ ತಮ್ಮ ಲೇಖನದಲ್ಲಿ ಪ್ರಕಟಿಸಿದ್ದಾರೆ.
ಅಡ್ವಾಣಿ ಅವರ ವಯಸ್ಸು ಹಾಗೂ ಅವರ ಕಾರ್ಯಕ್ಷಮತೆ ಕುರಿತು ಜನರಲ್ಲಿ ಶಂಕೆ ಹುಟ್ಟಿಸುವ ಮೂಲಕ ಕಾಂಗ್ರೆಸ್ ಲಾಭ ಪಡೆಯಿತು. ಮಹಾಭಾರತದಲ್ಲಿ ಭೀಷ್ಮ ಪಿತಾಮಹನ ಎದುರಿಗೆ ಶಿಖಂಡಿಯನ್ನು ಬಳಸಿಕೊಂಡಂತೆ ಆ ಪಕ್ಷ ಮನಮೋಹನ್ ಸಿಂಗ್ ಅವರನ್ನು ಬಳಸಿಕೊಂಡಿತು ಎಂದು ಸ್ವರೂಪ್ ಟೀಕಿಸಿದ್ದಾರೆ. ಚುನಾವಣೆಯ ಮುನ್ನ ಆಡ್ವಾಣಿ ತಮ್ಮ ಆತ್ಮಚರಿತ್ರೆಯನ್ನು ವಿವಿಧ ಭಾಷೆಗಳಲ್ಲಿ ಅನುವಾದ ಮಾಡಿಸಿ ಅಬ್ಬರದ ಪ್ರಚಾರದೊಂದಿಗೆ ಬಿಡುಗಡೆ ಮಾಡಿದ್ದನ್ನೂ ಸ್ವರೂಪ್ ತಮ್ಮ ಲೇಖನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
(ಏಜನ್ಸೀಸ್)