ಎಚ್1ಎನ್1ಗೆ ಬೆಂಗ್ಳೂರಿನ ಟೆಕ್ಕಿ ಬಲಿ
ನಗರದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಕಳೆದ ತಿಂಗಳು 28 ರಂದು ಲೇಕ್ ಸೈಡ್ ಆಸ್ಪತ್ರೆಗೆ ದಾಖಲಾಗಿದ್ದರು. ನ್ಯೂಮೋನಿಯಾದಿಂದ ಬಳಲುತ್ತಿದ್ದ ಟೆಕ್ಕಿ ಮಂಗಳವಾರ ಸಂಜೆ ಸಾವನ್ನಪ್ಪಿದ್ದಾರೆ. ಇವರ ಸ್ವಾಬ್ ಮಾದರಿಯ ಪರೀಕ್ಷಾ ವರದಿ ಬಂದಿದ್ದು, ಟೆಕ್ಕಿ ಎಚ್1ಎನ್1 ಸೋಂಕಿನಿಂದಲೇ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಲೇಕ್ ಸೈಡ್ ಆಸ್ಪತ್ರೆಯ ನಿರ್ದೇಶಕ ಎಚ್ ಪರಮೇಶ್ ಸ್ಪಷ್ಟಪಡಿಸಿದ್ದಾರೆ. ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ 38 ವರ್ಷದ ವ್ಯಕ್ತಿಯೊಬ್ಬರು ಕೂಡಾ ಸೋಂಕಿನಿಂದಲೇ ಸಾವನ್ನಪ್ಪಿರುವ ವರದಿಯಾಗಿದೆ.
ಸೋಂಕು ಪೀಡಿತರ ವಿವರ ಸ್ಪಷ್ಟಪಡಿಸಲ್ಲ:ಚೆಲುವರಾಜು
ಮೃತಪಟ್ಟ ಸೋಂಕುಪೀಡಿತರ ವಿವರ ನೀಡಲು ಸಂಬಂಧಿಕರ ಮತ್ತು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಅನುಮತಿ ಪಡೆಯದಿರುವ ಹಿನ್ನೆಲೆಯಲ್ಲಿ ಸೋಂಕು ಪೀಡಿತರ ಕುರಿತು ವಿವರಗಳನ್ನು ನೀಡುವುದಿಲ್ಲ ಎಂದು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚೆಲುವರಾಜು ಹೇಳಿದ್ದಾರೆ. ಮೃತ ಸೋಂಕು ಪೀಡಿತರ ವಿವರ ನೀಡಲು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಿಂಜರಿಯುತ್ತಿದ್ದಾರೆ. ಹೆಸರು ಬಹಿರಂಗಪಡಿಸುವುದರಿಂದ ಇತರ ರೋಗಿಗಳು ಮತ್ತು ಆಸ್ಪತ್ರೆಯ ಕಾರ್ಯನಿರ್ವಹಣೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎನ್ನುತ್ತಿದ್ದಾರೆ. ಈ ಕಾರಣದಿಂದ ನಾವು ಇನ್ನು ಮುಂದೆ ಸೋಂಕುಪೀಡಿತರ ಹೆಸರು ಬಹಿರಂಗಪಡಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೀಗ ಬಂದ ಸುದ್ದಿಯ ಪ್ರಕಾರ, ಮಲ್ಯಾದ್ರಿ (35) ಎಂಬ ಯುವಕ ಹೈದರಾಬಾದ್ ನಲ್ಲಿ ಹಂದಿಜ್ವರ ತುತ್ತಾಗಿ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಸುದ್ದಿ ಕೇಳಿ ಆಘಾತಗೊಂಡ ಆತನ ಪತ್ನಿ ಶೋಭಾ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಆಂಧ್ರಪ್ರದೇಶದಲ್ಲಿ ಹಂದಿಜ್ವರಕ್ಕೆ ಸತ್ತವರ ಸಂಖ್ಯೆ 2 ಕ್ಕೆ ಏರಿದೆ.
(ದಟ್ಸ್ ಕನ್ನಡ ವಾರ್ತೆ)