ದೆಹಲಿ ತಂಡ ತ್ಯಜಿಸಿದ ಸೆಹ್ವಾಗ್ ?

ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸೆಹ್ವಾಗ್, ತಮ್ಮ ನಿಲುವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಇನ್ನಷ್ಟು ಆಟಗಾರರು ದೆಹಲಿ ತಂಡದಿಂದ ಹೊರಗೆ ಬರಲಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪುನರ್ನಿರ್ಮಾಣ ಶಿಬಿರದಲ್ಲಿ ಪಾಲ್ಗೊಂಡಿರುವ ಸೆಹ್ವಾಗ್, ತಂಡ ತೊರೆಯುವ ತೀರ್ಮಾನದ ಕುರಿತು ಸುಳಿವು ನೀಡಿದ್ದಾರೆ. ಈ ಕುರಿತಂತೆ ಆಗಸ್ಟ್ 27 ಅಥವಾ 28ರಂದು ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ಅರುಣ್ ಜೇಟ್ಲಿ ಜತೆ ಮಹತ್ವದ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ತಂಡದ ಆಯ್ಕೆ ವಿಷಯದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ನಾಯಕನನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಅಲ್ಲದೇ ಡಿಡಿಸಿಎನಲ್ಲಿ ಭ್ರಷ್ಟಾಚಾರ ಕೂಡ ತಾಂಡವವಾಡುತ್ತಿದೆ ಎಂದು ಸೆಹ್ವಾಗ್ ಆರೋಪಿಸಿದ್ದಾರೆ.
ಸೆಹವಾಗ್ ಬರುವ ರಣಜಿ ಋತುವಿನಲ್ಲಿ ದಿಲ್ಲಿ ತಂಡ ತೊರೆದು ಹರಿಯಾಣಾ ಪರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ ಡಿಡಿಸಿಎ ಉನ್ನತ ಮೂಲಗಳ ಪ್ರಕಾರ ಸೆಹವಾಗ್ ತಮ್ಮ ಬೆಂಬಲಿಗರನ್ನು ತಂಡಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಾಯಾಂಕ್ ತೆಹ್ಲಾನ್ ಹಾಗೂ ಪ್ರದೀಪ್ ಸಂಗ್ವಾನ್ರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಸೆಹವಾಗ್ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಸುನೀಲ್ ವಾಗ್ದಾಳಿ
ಸೆಹವಾಗ್ ಹೇಳಿಕೆಗೆ ತಿರುಗೇಟು ನೀಡಿರುವ ಡಿಡಿಸಿಎ ಕಾರ್ಯದರ್ಶಿ ಸುನೀಲ್ ದೇವ್, ನಾಯಕನ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಮಾತ್ರವಲ್ಲದೇ ಬೇರೆ ರಾಜ್ಯಗಳ ಪರ ಆಡುವ ಕುರಿತಂತೆ ಯಾವುದೇ ಚರ್ಚೆ ನಡೆಸಿಲ್ಲ. ಅಲ್ಲದೇ 16 ಮತ್ತು 18 ವರ್ಷದೊಳಗಿನ ತಂಡದ ಆಯ್ಕೆ ಪ್ರಕ್ರಿಯೆ ಕುರಿತು ಟೀಕಿಸಬಾರದಿತ್ತು ಎಂದು ವಿಷಾದಿಸಿ ದ್ದಾರೆ.
ಹರಿಯಾಣಾ ಸಂಸ್ಥೆ ಸ್ವಾಗತ ಏತನ್ಮಧ್ಯೆ ವೀರೇಂದ್ರ ಸೆಹವಾಗ್ ನಿರ್ಧಾರವನ್ನು ಸ್ವಾಗತಿಸಿರುವ ಹರಿಯಾಣಾ ಕ್ರಿಕೆಟ್ ಸಂಸ್ಥೆ (ಎಚ್ಸಿಎ) ರಾಜ್ಯ ತಂಡಕ್ಕೆ ಸೇರಿಕೊಳ್ಳಲು ಅವರಿಗೆ ಆಮಂತ್ರಣ ನೀಡಿದೆ. ಈ ಕುರಿತಂತೆ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಎಚ್ಸಿಎ ಕಾರ್ಯದರ್ಶಿ ಅನಿರುದ್ಧ್ ಚೌಧರಿ, ಸೆಹ್ವಾಗ್ ಕಳೆದ ವರ್ಷವೇ ಹರಿಯಾಣಾ ತಂಡ ಪ್ರತಿನಿಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ನಾವು ಸಹ ಅಧಿಕೃತ ಆಹ್ವಾನ ನೀಡಿದ್ದೆವು. ಆದರೆ ಸೆಹ್ವಾಗ್ ಡಿಡಿಸಿಎ ಅಧ್ಯಕ್ಷ ಅರುಣ್ ಜೇಟ್ಲಿ ಬಗೆಗೆ ಹೊಂದಿದ ಗೌರವದಿಂದಾಗಿ ದೆಹಲಿ ತೊರೆಯುವ ನಿರ್ಧಾರ ಕೈಬಿಟ್ಟಿದ್ದರು. ಸದ್ಯದ ಮಟ್ಟಿಗೆ ಡಿಡಿಸಿಎನಲ್ಲಿ ಅಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಸೆಹ್ವಾಗ್ ದಿಲ್ಲಿ ತಂಡ ತೊರೆದು ಬಂದರೆ ಸ್ವಾಗತಿಸುವುದಾಗಿ ಅನಿರುದ್ಧ್ ಚೌಧರಿ ತಿಳಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications