ರೆಡ್ಡಿ ರಾಜಕೀಯಕ್ಕೆ ನಾಲಾಯಕ್: ಸಿದ್ದರಾಮಯ್ಯ
ಚಾಮರಾಜನಗರ, ಆ.17: ಆತ ಸಂಸ್ಕೃತಿ ಇಲ್ಲದ ಒಬ್ಬ ಅನಾಗರಿಕ ಮತ್ತು ಆತ ರಾಜಕೀಯಕ್ಕೆ ನಾಲಾಯಕ್. ಬಳ್ಳಾರಿ ಮಣ್ಣಿನ ಹಣದ ಮದ ಆತನನ್ನು ಹಾಗೆ ಆಡಿಸುತ್ತಿದೆ. ಆತನ ಮಟ್ಟಕ್ಕೆ ನಾನು ಇಳಿಯಲಾರೆ. ಸರಿಯಾದ ವೇದಿಕೆಯಲ್ಲಿ ಸಂಸದೀಯ ಪದಗಳನ್ನು ಬಳಸಿ ಸೂಕ್ತ ಉತ್ತರ ನೀಡುತ್ತೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪ್ರವಾಸೋಧ್ಯಮ ಸಚಿವ ಜನಾರ್ದನ ರೆಡ್ಡಿ ಅವರನ್ನು ಜರಿದಿದ್ದಾರೆ.
ಮುಖ್ಯಮಂತ್ರಿಗಳಿಗೆ ಸುಳ್ಳೇ ಮನೆದೇವರಾಗಿದೆ. ಅವರು ಎಲ್ಲಾ ವಿಚಾರದಲ್ಲೂ ಸಾಕಷ್ಟು ಸುಳ್ಳು ಹೇಳುತ್ತಿದ್ದಾರೆ. ಮತದಾರರು ಅವರನ್ನು ಮತ್ತು ಅವರ ಪಕ್ಷದವರನ್ನು ನಂಬುವ ಸ್ಥಿತಿಯಲ್ಲಿಲ್ಲ. ಬೆಲೆ ಏರಿಕೆ, ಹಂದಿಜ್ವರ ಮುಂತಾದ ಸಮಸ್ಯೆಗಳಿಂದ ಜನ ತತ್ತರಿಸುತ್ತಿದ್ದರೂ, ಮಂತ್ರಿಗಳು ಸಮಸ್ಯೆಗೆ ಸ್ಪಂದಿಸದೇ ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ಸಿದ್ದು ಆರೋಪಿಸಿದ್ದಾರೆ.
ಇತ್ತ ಚಿತ್ತಾಪುರದಲ್ಲಿ ಪಕ್ಷದ ಅಭ್ಯರ್ಥಿ ಪರ ಮಾತನಾಡುತ್ತಾ ಜನಾರ್ಧನ ರೆಡ್ಡಿ, ಸಿದ್ದರಾಮಯ್ಯ ಅವರ ಕೆಟ್ಟ ಕಾಲ ಆರಂಭವಾಗಿದೆ. ಕಳೆದ 14 ತಿಂಗಳಲ್ಲಿ ಸರಕಾರ ಅನೇಕ ಜನಪರ ಯೋಜನೆ ಜಾರಿಗೆ ತಂದಿದೆ. ಹಂದಿಜ್ವರ ಮುಂತಾದ ವಿಷಯದಲ್ಲೂ ರಾಜಕೀಯ ಮಾಡುತ್ತಿರುವ ಸಿದ್ದರಾಮಯ್ಯ ಗೆ ಹಂದಿಜ್ವರ ಬರಲಿ ಎಂದು ಮತ್ತೆ ಗುಡುಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications