ಚನ್ನಪಟ್ಟಣದಲ್ಲಿ ಸಚಿವ ಕಟ್ಟಾಗೆ ಕಪಾಳಮೋಕ್ಷ !

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ಮುಗಿಸಿ ಸಂಜೆ 5 ಗಂಟೆ ಸಮಯದಲ್ಲಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ವೆಂಕಟರಮಣಪ್ಪ ಹಾಗೂ ಶಾಸಕ ಮುನಿರಾಜು ಅವರು ಚನ್ನಪಟ್ಟಣದ ಚರ್ಚೆ ರಸ್ತೆಯಲ್ಲಿ ಬರುತ್ತಿದ್ದಾಗ 50 ಜನರಿದ್ದ ಜೆಡಿಎಸ್ ಕಾರ್ಯಕರ್ತರ ಗುಂಪೊಂದು ಕಾರು ಅಡ್ಡಗಟ್ಟಿ ಈ ಕೃತ್ಯ ನಡೆಸಿದ್ದಾರೆ. ಗುಂಪಿನಲ್ಲಿದ್ದ ಒಬ್ಬಾತ ಸಚಿವ ಮತ್ತು ಶಾಸಕರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಹಿರಂಗ ಪ್ರಚಾರ ಸಮಯದ ನಂತರ ಹೊರಗಿನವರು ಇಲ್ಲೇ ಇದ್ದಾರೆ ಎಂದು ಆಕ್ಷೇಪಿಸಿ ಜಾತ್ಯಾತೀತ ಜನತಾದಳ ಕಾರ್ಯಕರ್ತರು ಸಚಿವರ ಕಾರು ಅಡ್ಡಗಟ್ಟಿ ಪ್ರತಿಭಟಿಸಿದಾಗ ಈ ಅಹಿತಕರ ಘಟನೆ ನಡೆಯಿತು. ಘಟನೆಯಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಘಟನೆ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಜೆಡಿಎಸ್ ಕಾರ್ಯಕರ್ತರೊಂದಿಗೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ವಾತಾವರಣವನ್ನು ತಿಳಿಗೊಳಿಸಲಾಯಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications