ಚನ್ನಪಟ್ಟಣದಲ್ಲಿ ಸಚಿವ ಕಟ್ಟಾಗೆ ಕಪಾಳಮೋಕ್ಷ !
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ಮುಗಿಸಿ ಸಂಜೆ 5 ಗಂಟೆ ಸಮಯದಲ್ಲಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ವೆಂಕಟರಮಣಪ್ಪ ಹಾಗೂ ಶಾಸಕ ಮುನಿರಾಜು ಅವರು ಚನ್ನಪಟ್ಟಣದ ಚರ್ಚೆ ರಸ್ತೆಯಲ್ಲಿ ಬರುತ್ತಿದ್ದಾಗ 50 ಜನರಿದ್ದ ಜೆಡಿಎಸ್ ಕಾರ್ಯಕರ್ತರ ಗುಂಪೊಂದು ಕಾರು ಅಡ್ಡಗಟ್ಟಿ ಈ ಕೃತ್ಯ ನಡೆಸಿದ್ದಾರೆ. ಗುಂಪಿನಲ್ಲಿದ್ದ ಒಬ್ಬಾತ ಸಚಿವ ಮತ್ತು ಶಾಸಕರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಹಿರಂಗ ಪ್ರಚಾರ ಸಮಯದ ನಂತರ ಹೊರಗಿನವರು ಇಲ್ಲೇ ಇದ್ದಾರೆ ಎಂದು ಆಕ್ಷೇಪಿಸಿ ಜಾತ್ಯಾತೀತ ಜನತಾದಳ ಕಾರ್ಯಕರ್ತರು ಸಚಿವರ ಕಾರು ಅಡ್ಡಗಟ್ಟಿ ಪ್ರತಿಭಟಿಸಿದಾಗ ಈ ಅಹಿತಕರ ಘಟನೆ ನಡೆಯಿತು. ಘಟನೆಯಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಘಟನೆ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಜೆಡಿಎಸ್ ಕಾರ್ಯಕರ್ತರೊಂದಿಗೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ವಾತಾವರಣವನ್ನು ತಿಳಿಗೊಳಿಸಲಾಯಿತು.
(ದಟ್ಸ್ ಕನ್ನಡ ವಾರ್ತೆ)