ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ
ಬೆಂಗಳೂರು, ಆ, 6 : ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಇತರೆ ಸಾಮಾಜಿಕ ವಿಷಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ "ಗ್ರಾಮೀಣ ಹೆಣ್ಣುಮಗು" ಎಂಬ ವಿಷಯದ ಕುರಿತು ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯ ನಿಯಮ ಮತ್ತು ಷರತ್ತುಗಳು ಕೆಳಕಂಡಂತಿವೆ.
ಸ್ಪರ್ಧೆಗೆ ಸ್ವೀಕೃತವಾದ ಚಿತ್ರಗಳನ್ನು ತಾಂತ್ರಿಕ ಪರಿಣತರ ಸಮಿತಿಯು ಬಹುಮಾನಕ್ಕಾಗಿ ಆಯ್ಕೆ ಮಾಡುವುದು. ಛಾಯಾಚಿತ್ರಗಳನ್ನು ಸ್ವೀಕರಿಸಲು ಅಂತಿಮ ದಿನಾಂಕ 30-9-09. ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೇಂದ್ರ ಕಛೇರಿಯ ಉಪನಿರ್ದೇಶಕರು ದೂರವಾಣಿ 222028050 ಹಾಗೂ ಸಂಬಂಧಪಟ್ಟ ಜಿಲ್ಲಾ ವಾರ್ತಾಧಿಕಾರಿಗಳನ್ನು ಸಂಪರ್ಕಿಸಬಹುದು.
ಬಹುಮಾನ ವಿವರಗಳು, ಪ್ರಥಮ ಬಹುಮಾನ 20 ಸಾವಿರ ರುಪಾಯಿ, ದ್ವಿತೀಯ ಬಹುಮಾನ 15 ಸಾವಿರ ರುಪಾಯಿ, ತೃತೀಯ ಬಹುಮಾನ 10 ಸಾವಿರ ರುಪಾಯಿ, 10 ಸಮಾಧಾನಕರ ಬಹುಮಾನಗಳು ತಲಾ 1 ಸಾವಿರ ರುಪಾಯಿಗಳು.
ಸ್ಪರ್ಧೆಯ ನಿಯಮ ಮತ್ತು ಷರತ್ತುಗಳು
ಸ್ಪರ್ಧೆಗೆ ಪ್ರವೇಶ ಶುಲ್ಕ ಇರುವುದಿಲ್ಲ. ವಾರ್ತಾ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿ ಇತರೆ ಎಲ್ಲರಿಗೂ ಸ್ಪರ್ಧೆಗೆ ಮುಕ್ತ ಪ್ರವೇಶಾವಕಾಶವಿರುತ್ತದೆ. ಮೌಂಟ್ ಮಾಡಿರದ 16" x 20" ಅಳತೆಯ ಚಿತ್ರವನ್ನು ಸ್ಪರ್ಧೆಗೆ ಕಳುಹಿಸಬೇಕು (ಗರಿಷ್ಠ 4 ಚಿತ್ರಗಳು). ಚಿತ್ರದ ಹಿಂಬದಿಯಲ್ಲಿ ಛಾಯಾಗ್ರಾಹಕರ ಹೆಸರು ಬರೆದಿರಬೇಕು. ಡಿಜಿಟಲ್ ತಂತ್ರಜ್ಞಾನ ಉಪಯೋಗಿಸಿ ಮೂಲ ಛಾಯಾಚಿತ್ರದ ಸ್ವರೂಪವನ್ನು ಬದಲಿಸಿದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಛಾಯಾಚಿತ್ರಗಳ ಜೊತೆ ಚಿತ್ರಗ್ರಾಹಕರ ಹೆಸರು, ವಯಸ್ಸು, ವಿಳಾಸ, ರಾಷ್ಟ್ರೀಯತೆ, ಇ-ಮೇಲ್, ಇತ್ಯಾದಿ ವಿವರಗಳನ್ನು ಕಳುಹಿಸಬೇಕು.
ಚಿತ್ರಗಳನ್ನು "ಛಾಯಾಚಿತ್ರ ಸ್ಪರ್ಧೆ" ಎಂದು ಬರೆಯಲ್ಪಟ್ಟ ಲಕೋಟೆಯಲ್ಲಿ ನಿರ್ದೇಶಕರು, ವಾರ್ತಾ ಇಲಾಖೆ, "ವಾರ್ತಾ ಸೌಧ", ನಂ. 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-560001 ಇವರಿಗೆ ಕಳುಹಿಸಬೇಕು. ಸ್ಪರ್ಧಾ ಚಿತ್ರಗಳನ್ನು ಸ್ವೀಕರಿಸಲು ಅಂತಿಮ ದಿನಾಂಕ 30-09-09. ಸ್ಪರ್ಧಾ ಚಿತ್ರಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಆಯ್ಕೆಯಾದ ಚಿತ್ರಗಳನ್ನು ಇಲಾಖೆಯ ಪ್ರಕಟಣೆಗಳಲ್ಲಿ, ಸರ್ಕಾರಿ ಜಾಹೀರಾತುಗಳಲ್ಲಿ, ಪ್ರದರ್ಶನಗಳಲ್ಲಿ ಪ್ರದರ್ಶಿಸಲು ವಾರ್ತಾ ಇಲಾಖೆಯು ಹಕ್ಕುಗಳನ್ನು ಹೊಂದಿರುತ್ತದೆ.
(ದಟ್ಸ್ ಕನ್ನಡ ವಾರ್ತೆ)