ಮುಂಬೈ ಅವಳಿ ಸ್ಫೋಟ : ಮೂವರಿಗೂ ಮರಣದಂಡನೆ
2003ರಲ್ಲಿ ನಡೆದ ಮುಂಬೈನ ಗೇಟ್ ವೇ ಇಂಡಿಯಾ ಮತ್ತು ಝವೇರಿ ಬಜಾರ್ ಬಳಿ ನಡೆಸಿದ್ದ ಅವಳಿ ಸ್ಪೋಟದಲ್ಲಿ ಸುಮಾರು 53 ಮಂದಿ ಸಾವನ್ನಪ್ಪಿದ್ದರು. ಸುಮಾರು 245 ಮಂದಿ ಗಾಯಗೊಂಡಿದ್ದರು. ಸ್ಫೋಟಕ್ಕೆ ಸಂಬಂಧಿಸಿದಂತೆ ಮೊಹ್ಮದ್ ಹನೀಫ್ ಸಯ್ಯದ್ (46), ಈತನ ಪತ್ನಿ ಪಹಮೀದಾ(43) ಮತ್ತು ಅಶ್ರತ್ ಶಫೀಕ್ ಅನ್ಸಾರಿ (32) ಅವರ ಮೇಲಿದ್ದ ಆರೋಪ ದೃಡಪಟ್ಟಿತ್ತು. ಈ ಮೂವರು ಅಪರಾಧಿಗಳು ಎಂದು ಪೋಟಾ ನ್ಯಾಯಾಲಯ ಘೋಷಿಸಿತ್ತು. ಆಗಸ್ಟ್ 4 ರಂದು ಶಿಕ್ಷೆ ಪ್ರಮಾಣ ಘೋಷಿಸುವುದಾಗಿ ಹೇಳಿತ್ತು. ಆದರೆ, ಮತ್ತಷ್ಟು ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಮೂವರಿಗೂ ಗಲ್ಲು ಶಿಕ್ಷೆ ಖಾಯಂಗೊಳಿಸಿದೆ.
ಪಹಮೀದಾ ಅವರನ್ನು ಕಳೆದ ಆರು ವರ್ಷಗಳಿಂದ ಬೈಕುಲ್ಲಾ ಜೈಲಿನಲ್ಲಿ ಇಡಲಾಗಿತ್ತು. ಹನೀಫ್ ಸಯ್ಯದ್ ಮತ್ತು ಅಶ್ರತ್ ಅನ್ಸಾರಿ ಅವರನ್ನು ಆರ್ಥರ್ ಜೈಲಿನಲ್ಲಿ ಇರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 103 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಗೋಧ್ರಾ ನಂತರದ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಮುಂಬೈನಲ್ಲಿ ಅವಳಿ ಸ್ಫೋಟ ನಡೆಸಲು ಪ್ರಮುಖ ಕಾರಣವಾಗಿದೆ. ದುಬೈನಿಂದ ಸಂಚು ರೂಪರೇಷೆಗಳನ್ನು ರೂಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು. 2003 ಆಗಸ್ಟ್ 25 ರಂದು ಮುಂಬೈಯಲ್ಲಿ ಅವಳಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 53 ಸಾವನ್ನಪ್ಪಿದ್ದು, 245 ಮಂದಿ ಗಾಯಗೊಂಡಿದ್ದರು. ಗಲ್ಲಿ ಬೇಡ ಜೀವವಾಧಿ ಶಿಕ್ಷೆ ವಿಧಿಸಿ ಎಂದು ಹನೀಫ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದ.
(ಏಜನ್ಸೀಸ್)