ತಿರುವಳ್ಳುವರ್ ಮಹಾಜ್ಞಾನಿ : ರಾಮಾ ಜೋಯಿಸ್
ಬೆಂಗಳೂರು, ಆ. 5 : ಮಹಾಜ್ಞಾನಿ ತಿರುವಳ್ಳುವರ್ ಪ್ರತಿಮೆಯ ಅನಾವರಣವನ್ನು ವಿರೋಧಿಸಿ ನಾವು ಸಣ್ಣವರಾಗುವುದು ಬೇಡ, ಅವರನ್ನು ಗೌರವಿಸಿ ನಾವು ದೊಡ್ಡವರಾಗೋಣ ಎಂದು ನಿವೃತ್ತ ನ್ಯಾಯಾಧೀಶ, ಮಾಜಿ ರಾಜ್ಯಪಾಲ, ರಾಜ್ಯ ಸಭಾ ಸದಸ್ಯ ರಾಮಾಜೋಯಿಸ್ ಕಿವಿಮಾತು ಹೇಳಿದ್ದಾರೆ.
ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ಅರ್ಥ ಮತ್ತು ತಾತ್ಪರ್ಯವನ್ನು ತಮಿಳು ಸಹೋದರರಿಗೆ ತಿರುಕ್ಕುರಳ್ ಗ್ರಂಥದ ಮೂಲಕ ನೀಡಿರುವ ಮಹಾಜ್ಞಾನಿ ತಿರುವಳ್ಳವರ್. ಭಾರತೀಯ ಧರ್ಮ ಮತ್ತು ಸಂಸ್ಕೃತಿಯ ಸಾರವೆಲ್ಲವನ್ನು ಈ ಪುಸ್ತಕದ ಮೂಲಕ ನೀಡಿದ್ದಾರೆ. ಮುಖ್ಯವಾಗಿ ಪಿತೃಋಣ, ದೇವಋಣ ತೀರಿಸುವುದು, ಅತಿಥಿ ಸತ್ಕಾರ ಮಾಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯವೆಂದು ಸಾರಿರುವ ಮಹಾಮಾನವ ತಿರುವಳ್ಳುವರ್ ಎಂದವರು ಬಣ್ಣಿಸಿದ್ದಾರೆ.
ತಿರುವಳ್ಳುವರ್ರಂತಹ ಮಹಾಜ್ಞಾನಿಯ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ಅದರ ಅನಾವರಣ ಭಾರತೀಯರ ಭ್ರಾತೃತ್ವ ಭಾವನೆಯ ಸಂಕೇತವಾದ ರಕ್ಷಾಬಂಧನದಂತಹ ಪುಣ್ಯ ದಿನದಂದು ನಡೆಯುತ್ತಿರುವುದು ಒಂದು ಐತಿಹಾಸಿಕ ಘಟನೆ. ಇದು ನಮ್ಮ ರಾಷ್ಟ್ರೀಯ ಏಕತೆಯ ಪುರಾವೆ ಎಂದವರು ಹೇಳಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಯವರು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಒಮ್ಮತದ ಬೆಂಬಲ ಬಂದಿರುವುದು ಬಹಳ ಸಂತೋಷದ ಸಂಗತಿ.
ತಿರುವಳ್ಳವರ್ ಪ್ರತಿಮೆಯನ್ನು ಭಾರತದ ಯಾವ ಭಾಗದಲ್ಲಾದರೂ ಸ್ಥಾಪನೆಯಾಗುವುದನ್ನು ನಾವು ಸ್ವಾಗತಿಸಬೇಕು. ಹೀಗಿರುವಾಗ ಕನ್ನಡದ ಅಭಿಮಾನಿಗಳೆಂದು ಹೇಳಿಕೊಳ್ಳುವ ಕೆಲವರು ಇದನ್ನು ವಿರೋಧಿಸುತ್ತಿರುವುದು ವಿಷಾದಕರ. ಕನ್ನಡದ ಅಭಿಮಾನದ ಗುಂಗಿನಲ್ಲಿ ಭಾರತೀಯರ ಏಕತೆ ಹಾಗೂ ರಾಷ್ಟ್ರಾಭಿಮಾನಕ್ಕೆ, ರಾಷ್ಟ್ರೀಯ ಭ್ರಾತೃತ್ವಕ್ಕೆ ಕುಂದುತರುವ ಇಂತಹ ವಿರೋಧ ಮಾಡಬಾರದೆಂದು ಅರಿಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications