ಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ
ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. ಆದರೆ, ಪತ್ನಿಯರಿಂದ ಹೀನಾಯ ಸ್ಥಿತಿಗಿಳಿದಿರುವ ಗಂಡಂದಿರ ಬಗ್ಗೆ, ದೌರ್ಜನ್ಯಕ್ಕೊಳಗಾಗಿ ಸ್ವಾತಂತ್ರ್ಯ ಕಳೆದುಕೊಂಡಿರುವ ಗಂಡಂದಿರ ಬಗ್ಗೆ ಸುದ್ದಿಗಳು ಪ್ರಾಮುಖ್ಯತೆ ಪಡೆಯುವುದೇ ಇಲ್ಲ ಎಂಬುದು ಪತ್ನಿಯರ ದಬ್ಬಾಳಿಕೆಯಿಂದ ಬಸವಳಿದವರ ಸಂಘದ ಸದಸ್ಯರ ಅಳಲು. ಸಾಲದ್ದಕ್ಕೆ, ಕಾನೂನು ಮತ್ತು ಸಮಾಜ ಕೂಡ ಪತ್ನಿಯರ ಪರ ವಹಿಸುತ್ತವೆ ಎಂದು ಸಂಕಟ ತೋಡಿಕೊಂಡಿದ್ದಾರೆ.
ವಿಚ್ಛೇದನಗೊಂಡ ಜೋಡಿಯ ಮಕ್ಕಳ ಪಾಲನೆ ವಿಷಯ ಬಂದಾಗ, ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಸುಳ್ಳು ದೂರುಗಳನ್ನು ನೋಡಿದಾಗ ಪೊಲೀಸರು ಮತ್ತು ನ್ಯಾಯಾಲಯ ಹೆಂಗಸರ ವಕಲಾತ್ತು ವಹಿಸುತ್ತವೆ ನಮ್ಮ ಪಾಡು ಶತ್ರುಗಳಿಗೂ ಬೇಡ ಎಂಬುದು ಶೋಷಿತ ಗಂಡಂದಿರ ವಾದ.
ಆಗಸ್ಟ್ 15ರಂದು ಭಾರತ ಸ್ವತಂತ್ರ ಪಡೆದ ದಿನ ದೇಶದಾದ್ಯಂತ ಇರುವ ಸುಮಾರು 30 ಸಾವಿರ ಪತ್ನಿಯರಿಂದ ಪೀಡನೆಗೊಳಗಾಗಿರುವ ಗಂಡಂದಿರ 100 ಪ್ರತಿನಿಧಿಗಳು ಶೀಮ್ಲಾದಲ್ಲಿ ದಿನಪೂರ್ತಿ ಚರ್ಚಿಸಿ ಸ್ವಾತಂತ್ರ್ಯ ಮತ್ತು ಘನತೆಯಿಂದ ಜೀವನ ನಡೆಸುವ ಬಗ್ಗೆ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ. ಬೆಂಗಳೂರು ಮೂಲದ ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಷನ್ (SIFF) ಜೊತೆ ಈ ಸಮಾವೇಶದಲ್ಲಿ ಬೆಂಗಳೂರಿನದೇ ಆದ ಮಕ್ಕಳ ಹಕ್ಕಿಗಾಗಿ ಹೋರಾಡುತ್ತಿರುವ CRISP ಸಂಸ್ಥೆ, ಮಹಾರಾಷ್ಟ್ರದ ಪುರುಷ ಸುರಕ್ಷಾ ಸಂಸ್ಥೆ ಮತ್ತು ಉತ್ತರ ಪ್ರದೇಶದ ಪತಿ ಪರಮೇಶ್ ಎಂಬ ಸಂಸ್ಥೆ ಕೈಜೋಡಿಸಲಿವೆ.
ಕಳೆದ ನಾಲ್ಕು ವರ್ಷಗಳಲ್ಲಿ 1.2 ಲಕ್ಷ ಪೀಡನೆಗೊಳಗಾದ ಗಂಡಂದಿರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂಕಿಅಂಶಗಳ ಹೆಂಡಂದಿರ ಆತ್ಮಹತ್ಯೆಗಿಂತ ಪತ್ನಿಯರ ಪೀಡನೆಯಿಂದ ಗಂಡಂದಿರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಮಾಣ ದುಪ್ಪಟ್ಟು ಎಂದು ಕ್ರಿಸ್ಪ್ ಸಂಸ್ಥೆ ಹೇಳಿದೆ. ನಾವು ಹೆಂಗಸರ ದ್ವೇಷಿಗಳೇನೂ ಅಲ್ಲ, ಆದರೆ, ಗಂಡಂದಿರ ಹಕ್ಕಿಗಾಗಿ ಮಾತ್ರ ಹೋರಾಡುತ್ತಿದ್ದೇವೆ ಎಂದು ಸಂಘಟನೆಗಳು ಹೇಳಿವೆ.
ಮಹಿಳೆ ಮತ್ತು ಮಕ್ಕಳ ಕಲ್ಯಾಣ ಮಂತ್ರಾಲಯದಂತೆ ಪುರುಷ ಕಲ್ಯಾಣ ಇಲಾಖೆ ತೆರೆಯಬೇಕು, ಗಂಡಸು ಮತ್ತು ಹೆಂಗಸರಿಗೆ ಸಮ ಆದಾಯ ತೆರಿಗೆ ವಿಧಿಸಬೇಕು, ಕೌಟುಂಬಿಕ ದೌರ್ಜನ್ಯ ನಿಗ್ರಹ ಕಾನೂನಿಗೆ ತಿದ್ದುಪಡಿ ತರಬೇಕು ಮತ್ತು ವಿಚ್ಛೇದಿತ ದಂಪತಿಗಳಿಗೆ ಸಮವಾಗಿ ಮಕ್ಕಳ ಪಾಲನೆಯ ಅವಕಾಶ ನೀಡಬೇಕು ಎಂಬುದು ಈ ಸಂಘಟನೆಯ ಕೆಲಪ್ರಮುಖ ಬೇಡಿಕೆಗಳು.
(ಏಜೆನ್ಸೀಸ್)