ತಮಿಳು ದೆವ್ವ ರಾಜ್ಯದಲ್ಲೇಕೆ : ವಾಟಾಳ್

ಬೆಂಗಳೂರಿನಲ್ಲಿ ತಿರುವಳ್ಳುವರ್ ಮತ್ತು ಚೆನ್ನೈನಲ್ಲಿ ಸರ್ವಜ್ಞನ ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳ ನಾಯಕರು, ಕನ್ನಡಪರ ಹೋರಾಟಗಾರರು, ಸಾಹಿತಿಗಳು ಮತ್ತು ಕಲಾವಿದರ ಅಭಿಪ್ರಾಯ ಸಂಗ್ರಹಿಸಿದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಆಗಸ್ಟ್ 9ಕ್ಕೆ ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಂತೆಯೇ ಸರಕಾರದ ನಿಲುವು ವಿರೋಧಿಸಿ ಕನ್ನಡಪರ ಸಂಘಟನೆಗಳು ದಿಕ್ಕರಿಸಿ ಸಭೆಯಿಂದ ಹೊರನಡೆದವು.
ಪ್ರತಿಮೆ ಅನಾವರಣಗೊಳಿಸಲು ಬಿಡುವುದಿಲ್ಲ. ಹೋರಾಟ ಮುಂದುವರೆಸುತ್ತೇವೆ. ಸರಕಾರಕ್ಕೆ ಧಿಕ್ಕಾರ ಎಂದ ವಾಟಾಳ್ ನಾಗರಾಜ್, ತಮಿಳುನಾಡಿನ ದೆವ್ವವನ್ನು ರಾಜ್ಯಕ್ಕೆ ತಂದಿದ್ದೀರಿ. ಕನ್ನಡಕ್ಕಾಗಿ ಪ್ರಾಣ ಕೊಡಲು ಸಿದ್ಧ, ತಿರುವಳ್ಳುವರ್ ಪ್ರತಿಮೆ ಸ್ಥಾಪಿಸುವ ಮೂಲಕ ತಮಿಳು ಸಾಮ್ರಾಜ್ಯಕ್ಕೆ ಅವಕಾಶ ಕೊಡುವುದಿಲ್ಲ. ರಾಜ್ ಅಪಹರಣ ವೇಳೆ ವೀರಪ್ಪನ್ ಈ ಬೇಡಿಕೆ ಇಟ್ಟಿದ್ದ. ಇದರಿಂದ ರಾಜ್ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿನಿಂದ ದಶಕ ದಶಕಗಳಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ಕಾವೇರಿ, ಹೊಗೇನಕಲ್ ಸೇರಿದಂತೆ ಅನೇಕ ವಿಷಯದಲ್ಲಿ ತಮಿಳು ಕನ್ನಡಿಗರಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಹೀಗಿರುವಾಗ ಕೇವಲ ತಮಿಳು ಮತಗಳ ಆಸೆಗಾಗಿ ರಾಜ್ಯವನ್ನು ಮಾರಾಟಕ್ಕೆ ಇಟ್ಟಿರುವ ಸರಕಾರದ ನಿಲುವು ಅತ್ಯಂತ ಖಂಡನೀಯ. ಯಡಿಯೂರಪ್ಪ ಅವರು ಕೂಡಲೇ ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳದಿದ್ದರೆ, ಆಗಸ್ಟ್ 9 ರಂದು ಬೆಂಗಳೂರು ಬಂದ್ ಆಚರಿಸುತ್ತೇವೆ ಎಂದು ಅವರು ವಾಟಾಳ್ ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications