ಶಿಕ್ಷಕಿಯ ಕಿಡ್ನಾಪ್ : ಅತ್ಯಾಚಾರವೆಸಗಿ ಕೊಲೆ
ಬೆಂಗಳೂರು, ಆ. 3 : ಡ್ರಾಪ್ ಕೊಡುವ ನೆಪದಲ್ಲಿ ಶಾಲಾ ಶಿಕ್ಷಕಿಯೊಬ್ಬರನ್ನು ಕಾರಿಗೆ ಹತ್ತಿಸಿಕೊಂಡು ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಶವವನ್ನು ತುಮಕೂರು ತಾಲ್ಲೂಕಿನ ಚಿಕ್ಕಸಾರಂಗಿ ಗ್ರಾಮದ ಹೊರವಲಯದ ಪೊದೆಯೊಂದರಲ್ಲಿ ಎಸೆದಿರುವ ಘಟನೆ ಭಾನುವಾರ ಬೆಳಕಿದೆ ಬಂದಿದೆ.
ಬಿಡದಿ ಸಮೀಪದ ಸರಕಾರಿ ಶಾಲೆಯ ಶಿಕ್ಷಕಿ ಕುಮುದ (35) ಕೊಲೆಯಾದ ದುರ್ದೈವಿ. ಈ ಶಿಕ್ಷಕಿ ಶನಿವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ಬಿಡದಿ ಬಸ್ ನಿಲ್ದಾಣದಿಂದ ಬಸವನಪುರಕ್ಕೆ ಹೋಗಲು ಬಸ್ ಗಾಗಿ ಕಾಯುತ್ತಿದ್ದಳು. ಈ ಸಂದರ್ಭದಲ್ಲಿ ಪೂರ್ವಯೋಜಿತವಾಗಿ ಅಲ್ಲಿಗೆ ಕಾರಿನಲ್ಲಿ ಬಂದ ಬಸವನಪುರದ ಯುವಕನೊಬ್ಬ ಬಸವನಪುರಕ್ಕೆ ಡ್ರಾಪ್ ಕೊಡುವುದಾಗಿ ಹೇಳಿದ.
ಈ ಯುವಕ ಬಸವನಪುರ ಶಾಲೆಯ ಹಳೆಯ ವಿದ್ಯಾರ್ಥಿ. ಕೊಲೆಯಾಗಿದ್ದ ಶಿಕ್ಷಕಿಗೂ ಕೂಡಾ ವಿದ್ಯಾರ್ಥಿಯಾಗಿದ್ದ. ಈ ಪರಿಚಯದಿಂದ ಶಿಕ್ಷಕಿ ಕುಮುದಾ ಹಿಂದೆಮುಂದೆ ನೋಡದೆ ಕಾರನ್ನು ಹತ್ತಿದ್ದಾಳೆ. ಕಾರಿನಲ್ಲಿ ನಾಲ್ಕು ಮಂದಿ ಇದ್ದರು. ಶಿಕ್ಷಕಿಯನ್ನು ಬಸವನಪುರ ಶಾಲೆಯ ಬಳಿ ಬಿಡದೆ ಕಾರಿನಲ್ಲೇ ಕಿಡ್ನಾಪ್ ಮಾಡಿದ ಮಾಡಿ ಸಾವನದುರ್ಗ ಸೇರಿದಂತೆ ಅನೇಕ ಪ್ರದೇಶಗಳಿಗೆ ಸುತ್ತಾಡಿಸಿದ್ದಾರೆ.
ಆರೋಪಿಗಳು ಕಾರಿನಲ್ಲಿ ಶಿಕ್ಷಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆಕೆಯ ಒಡವೆಗಳನ್ನು ಕಿತ್ತುಕೊಂಡಿದ್ದಾರೆ. ಮೊಬೈಲ್ ನ್ನು ಸ್ವಿಚ್ ಆಫ್ ಮಾಡಿದ್ದಾರೆ. ಕೊನೆಗೆ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ತುಮಕೂರು ತಾಲ್ಲೂಕಿನ ಚಿಕ್ಕಸಾರಂಗಿ ಗ್ರಾಮದ ಪೊದೆಯೊಂದರಲ್ಲಿ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)