ತಿರುವಳ್ಳುವರ್ ಪ್ರತಿಮೆ : ಪ್ರತಿಪಕ್ಷಗಳ ಬೆಂಬಲ

ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧಿ ನಾಯಕ ವಿ ಎಸ್ ಉಗ್ರಪ್ಪ, ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಜೆಡಿಎಸ್ ಮುಖಂಡರಾದ ಎಚ್ ಡಿ ರೇವಣ್ಣ, ಎಂ ಸಿ ನಾಣಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ, ಸಾಹಿತಿಗಳಾದ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ, ಖ್ಯಾತ ಸಂಶೋಧಕ ಎಂ ಚಿದಾನಂದಮೂರ್ತಿ, ಪಾಟೀಲ್ ಪುಟ್ಟಪ್ಪ, ಕನ್ನಡ ಚಳವಳಿಗಾರರಾದ ವಾಟಾಳ್ ನಾಗರಾಜ್, ನಾರಾಯಣಗೌಡ, ಪ್ರವೀಣಕುಮಾರ ಶೆಟ್ಟಿ, ಶಿವರಾಮೇಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಯಡಿಯೂರಪ್ಪ ಮಾತನಾಡಿ, ಕನ್ನಡ ಚಳವಳಿಗಾರರ ನೆಲ ಜಲ, ಗಡಿ ಗಳ ಹೋರಾಟ ದೊಡ್ಡದು. ಕರುಣಾನಿಧಿ ಅವರೊಂದಿಗೆ ರಾಜ್ಯ ಚರ್ಚಿಸಿ ಬಗೆಹರಿಸುವ ಎಲ್ಲ ಪ್ರಯತ್ನ ಮಾಡುವೆ ಎಂದು ಹೇಳಿದರು.
ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಅನೇಕ ಸಮಸ್ಯೆಗಳಿರುವುದು ಗೊತ್ತಿರುವ ಸಂಗತಿ. ಆ ಸಮಸ್ಯೆಗಳನ್ನು ಕಾನೂನಿನ ನೆಲೆಗಟ್ಟಿನಲ್ಲಿ ಬಗೆಹರಿಸಿಕೊಳ್ಳೋಣ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆ ಸಲ್ಲಿಸಿರುವ ತಮಿಳು ಕವಿ ತಿರುವಳ್ಳುವರ್ ಮತ್ತು ಸರ್ವಜ್ಞ ಅವರಿಗೆ ಅವಮಾನ ಖಂಡಿತ ಸಲ್ಲ. ಕವಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಅಡ್ಡಿ ಮಾಡುವುದು ಸರಿಯಲ್ಲ ಎಂದು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅಭಿಪ್ರಾಯಪಟ್ಟರು. ಖ್ಯಾತ ಸಂಶೋಧಕ ಎಂ ಚಿದಾನಂದಮೂರ್ತಿ ಕೂಡಾ ಶಿವರುದ್ರಪ್ಪ ಅವರೊಂದಿಗೆ ಧ್ವನಿಗೂಡಿಸಿದರು. ಆದರೆ, ದೇ ಜವರೇಗೌಡ ಅವರು ಚೆನ್ನೈ ನ ಪ್ರಮುಖ ಸ್ಥಳದಲ್ಲಿ ಸರ್ವಜ್ಞ ಪ್ರತಿಮೆ ಅನಾವರಣ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರೂ ಕೂಡಾ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಹಸಿರು ನಿಶಾನೆ ತೋರಿಸಿದರು. ಸರಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ತಮ್ಮ ಸಹಮತ ಸೂಚಿಸಿದರು. ಆದರೆ, ಕನ್ನಡಪರ ಸಂಘಟನೆಗಳು ಮಾತ್ರ ಪ್ರತಿಮೆ ಅನಾವರಣಕ್ಕೆ ಹಿಡಿದಿರುವ ವಿರೋಧದ ಪಟ್ಟನ್ನು ಸಡಿಸಲಿಲ್ಲ. ಈ ಹಿಂದೆಯೇ ಘೋಷಣೆ ಮಾಡಿರುವಂತೆ ಸರಕಾರದ ಕ್ರಮವನ್ನು ಖಂಡಿಸಿ ಆಗಸ್ಟ್ 9 ರಂದು ಬೆಂಗಳೂರು ಬಂದ್ ಆಚರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications