ಶಿವಮೊಗ್ಗದಲ್ಲಿ ಆಗಸ್ಟ್ ತಿಂಗಳುಪೂರ್ತಿ ಸಂಸ್ಕೃತೋತ್ಸವ
ಶಿವಮೊಗ್ಗ, ಜು. 29 : ಸಂಸ್ಕೃತ ಭಾರತಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಮ ಆಶ್ರಯದಲ್ಲಿ ಮತ್ತು ವಾಸವಿ ಶಾಲೆಯ ಆಡಳಿತ ಮಂಡಳಿಯ ಸಹಕಾರದೊಂದಿಗೆ ಸಂಸ್ಕೃತ ದಿನ ಪ್ರಯುಕ್ತ ಶಿವಮೊಗ್ಗ ನಗರದಲ್ಲಿ ಒಂದು ತಿಂಗಳ ಕಾಲ ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಾಸವಿ ವಿದ್ಯಾಲಯದ ಕಾರ್ಯದರ್ಶಿ ಶೇಷಾಚಲ ತಿಳಿಸಿದ್ದಾರೆ.
ಬುಧವಾರ ವಾಸವಿ ವಿದ್ಯಾಲಯದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 1ರಿಂದ 30ರವರೆಗೆ ಒಂದು ತಿಂಗಳ ಕಾಲ ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ನಗರದ ಹಲವೆಡೆ ಆಚರಿಸುತ್ತಿದ್ದೇವೆ. ಕಾರ್ಯಕ್ರಮ ಆಗಸ್ಟ್ 1ರಂದು ಸಂಜೆ 6.30ಕ್ಕೆ ನಗರದ ಗೌಡ ಸರಸ್ವತ ಬ್ರಾಹ್ಮಣ ಸಮಾಜದಲ್ಲಿ ನಡೆಯಲಿದ್ದು, ಆಗಸ್ಟ್ 2ರಂದು ಜ್ಯೋತಿಷೋತ್ಸವ ಎಂಬ ಕಾರ್ಯಕ್ರಮಗಳು ವಾಸವಿ ಶಾಲೆಯಲ್ಲಿ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿವೆ.
ಕಾರ್ಯಕ್ರಮದಲ್ಲಿ ಕವಡೆ ಶಾಸ್ತ್ರ, ತಂಡೋಲೆ ಶಾಸ್ತ್ರ (ಅಕ್ಕಿಯಲ್ಲಿ), ಜಾತಕ ಜ್ಯೋತಿಷ್ಯ ಹಾಗೂ ಮುಖ ನೋಡಿ ಜ್ಯೋತಿಷ್ಯ ಹೇಳುವುದನ್ನು ನಡೆಸಲಾಗುತ್ತದೆ. ಇದರಲ್ಲಿ ಪುದುಮಾಳ್ ಕವಡೆ ಶಾಸ್ತ್ರವನ್ನು, ಸಾಯಿ ನಾಗೇಶ್ ತಂಡೋಲೆ ಶಾಸ್ತ್ರವನ್ನು , ಸೀತಾರಾಂ ಜಾತಕ ಜ್ಯೋತಿಷ್ಯವನ್ನು ಹಾಗೆಯೇ ವೇಣುಗೋಪಾಲ್ ಮುಖ ನೋಡಿ ಜ್ಯೋತಿಷ್ಯ ಹೇಳುವ ಕಾರ್ಯಕ್ರಮವನ್ನು ನಡೆಸಿಕೊಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೈವಜ್ಞ ಸೋಮಯಾಜಿಗಳು ಹಾಗೂ ಚಲನಚಿತ್ರ ನಿರ್ದೇಶಕರಾದ ಕೆ.ಎಸ್.ಎಲ್.ಸ್ವಾಮಿ ಭಾಗವಹಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಶ್ನೆಗಳನ್ನು ಕೇಳುವವರು ವಾಸವಿ ಶಾಲೆಗೆ ಮೊದಲೇ ತಿಳಿಸಬೇಕು. ಅದೃಷ್ಟದ ಚೀಟಿ ಮೂಲಕ ಪ್ರಶ್ನೆಗಳಿಗೆ ಉತ್ತರ ಕೊಡಲಾಗುವುದು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಮಾಧ್ಯಮದವರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿದರು.
ಗೋಷ್ಠಿಯಲ್ಲಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ್ ಜಿ.ಕಾಮತ್, ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ, ವಾಸವಿ ವಿದ್ಯಾಲಯದ ಖಜಾಂಚಿ ಹೆಚ್. ಮಂಜುನಾಥ್ ಉಪಸ್ಥಿತರಿದ್ದರು.