ಮಳೆ ಅವಕೃಪೆ: ಶಿಕಾರಿಪುರ ಸಂಚಾರ ಅಸ್ತವ್ಯಸ್ತ

ಪಟ್ಟಣದ ಗೌರಿಹಳ್ಳ ಶಿಕಾರಿಪುರ ಮತ್ತು ಶಿರಾಳಕೊಪ್ಪದ ರಸ್ತೆಯಲ್ಲಿದ್ದು, ಕಳೆದ ಮೂರು ವರ್ಷಗಳಿಂದ ಮಳೆ ಹೆಚ್ಚಾದಾಗೆಲ್ಲಾ ವಾಹನ ಸಂಚಾರ ಸ್ಥಗಿತಗೊಳಿಸುವುದು ಹಾಗೇ ಕೊಟ್ಟ ಗ್ರಾಮ ಜಲಾವೃತವಾಗುವುದು ಸಾಮಾನ್ಯವಾಗಿದೆ. ಇದನ್ನು ತಡೆಗಟ್ಟಬೇಕೆಂದು ಕಳೆದ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಲಕ್ಷಾಂತರ ವೆಚ್ಚದಲ್ಲಿ ರಸ್ತೆಯ ಮಟ್ಟವನ್ನು ಏರಿಸುವುದು,ಗೊಚ್ಚು ಮಣ್ಣು ಹಾಕಿಸುವುದು ಮತ್ತು ಪೈಪ್ಗಳನ್ನು ಅಳವಡಿಸುವಂತಹ ಕಾಮಗಾರಿಯನ್ನು ಮಾಡಲಾಯಿತು. ಆದರೆ ಈ ಬಾರಿ ಪುನಃ ರಸ್ತೆಯ ಮೇಲೆ ನೀರು ನಿಂತು ಹಿಂದಿನದೇ ಪುನರಾವರ್ತನೆಯಾಗಿದೆ. ಹಾಗಾದರೆ ಕಾಮಗಾರಿಯ ಪ್ರಯೋಜನದ ಬಗ್ಗೆ ಅಧಿಕಾರಿಗಳೇ ತಿಳಿಸಬೇಕಾಗಿದೆ.
ನೀರು ಪೂರ್ಣ ಪ್ರಮಾಣದಲ್ಲಿ ಕಡಿಮೆಯಾದರೂ ವಾಹನ ಸಂಚಾರ ಕಷ್ಟ ಸಾಧ್ಯವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕಾರಣ ನೀರಿನ ರಭಸಕ್ಕೆ ಹಾಕಿದ ಮಣ್ಣೆಲ್ಲಾ ಕೊಚ್ಚಿ ಹೋಗಿದೆ. ರಸ್ತೆಗಳಲ್ಲಿ ಬಾವಿ ಗಾತ್ರದ ಗುಂಡಿಗಳಾಗಿದೆ. ಇಲ್ಲಿ ಸೇತುವೆ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಾ ಹಲವು ವರ್ಷಗಳೆ ಕಳೆದಿದೆ. ಆದರೆ ಈವರೆಗೆ ಕಾರ್ಯ ರೂಪಕ್ಕೆ ಬಂದಿಲ್ಲ. ಸರ್ಕಾರದಿಂದ ಮಳೆಹಾನಿಗೆಂದು ಬರುವ ಅನುದಾನದಲ್ಲಿ ಮತ್ತೆ ಅದೇ ಕಾಮಗಾರಿ ಆರಂಭವಾಗುತ್ತದೆ. ಪ್ರತೀ ವರ್ಷವೂ ಕಾಮಗಾರಿ ಮಾಡುವುದು ಅಂದರೆ ಇದೇನಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅಧಿಕಾರಿಗಳು ಸಾರ್ವಜನಿಕರ ಹಣ ಪೋಲಾಗದಂತಹ ಯೋಜನೆ ರೂಪಿಸಲಿ ಎನ್ನುವುದು ಎಲ್ಲರ ಆಶಯವಾಗಿದೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications