ಕಾಲಿಲ್ಲದೆ ಮರ ಹತ್ತುವ ಕುದುರೆ ಶ್ರೀನಿವಾಸ್
ಕಾಲಿಲ್ಲದ ಶ್ರೀನಿವಾಸ್ ಪಶುಸಾಕಾಣಿಕೆ ಮತ್ತು ಕೃಷಿ ಚಟುವಟಿಕೆಗಳನ್ನು ಯಾರ ಸಹಾಯವಿಲ್ಲದೇ ಮಾಡುತ್ತಾ ಬದುಕಿನ ಜಟಕಾಬಂಡಿ ತಳ್ಳುತ್ತಿದ್ದಾರೆ. ಶ್ರೀನಿವಾಸ್, ಹುಟ್ಟಿದ ಮೂರು ವರ್ಷಗಳಲ್ಲೇ ಪೋಲಿಯೋ ಹೆಮ್ಮಾರಿ ಕಾಡಿತ್ತು. ಇದರಿಂದ ಈ ಶ್ರೀನಿವಾಸ್ಗೆ ಬಾಲ್ಯದಿಂದಲೇ ಅಂಗವೈಕಲ್ಯ. ಕಾಲುಗಳು ಸ್ವಾಧೀನವಿಲ್ಲದಿದ್ದರೂ ಶ್ರೀನಿವಾಸ್ ಮಾತ್ರ ಎಂದು ಕೈಕಟ್ಟಿ ಕುಳಿತವರಲ್ಲ. ಶ್ರೀನಿವಾಸ್ ಬಾಲ್ಯದಿಂದಲೂ ಯಾರನ್ನೂ ಅವಲಂಬಿಸದೇ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಕಾಲುಗಳಲ್ಲಿ ಸ್ವಾಧೀನವಿಲ್ಲದಿದ್ದರೂ ಸಾಮಾನ್ಯರಿಗೆ ಸವಾಲು ಹಾಕುವಂತೆ ಮರವೇರುವುದು, ಪಶು ಸಾಕಾಣಿಕೆ, ಎತ್ತಿನ ಗಾಡಿ ಕಟ್ಟುವುದು ಮತ್ತು ಕೃಷಿಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಎಲ್ಲರಂತೆ ಅಂಗವಿಕಲರು ಬದುಕು ಸಾಗಿಸಬಹುದೆಂದು ತೋರಿಸಿಕೊಟ್ಟಿದ್ದಾರೆ.
ಪಿಯುಸಿಯವರೆಗೂ ವಿದ್ಯಾಭ್ಯಾಸ ಮಾಡಿದ್ದರೂ ಯಾವುದೇ ಕೆಲಸ ಸಿಗದಿದ್ದರಿಂದ ಕೃಷಿಯನ್ನೇ ಬದುಕಿಗೆ ಆಧಾರ ಮಾಡಿಕೊಂಡು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸುಖೀ ಕುಟುಂಬ ನಡೆಸುತ್ತಿದ್ದಾರೆ. ಸಾಮಾನ್ಯರಂತೆ ನಾನು ಕೂಡ ಜೀವನ ಮಾಡಬೇಕೆಂಬ ನಿಟ್ಟಿನಲ್ಲಿ ಧೃಡನಿಲುವು ಹೊಂದಿರುವುದರಿಂದಲೇ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಶ್ರೀನಿವಾಸ್ ವಿಶ್ವಾಸದಿಂದ ಹೇಳುತ್ತಾರೆ.
ಅಂಗವಿಕಲ ಒಂದು ಶಾಪವೆಂದು ತಿಳಿದು ಸಮಾಜ ಅಂಗವಿಕಲರನ್ನ ಕೀಳಿರಿಮೆಯಿಂದ ನೋಡುತ್ತಿದೆ. ಅಂಗವಿಕಲರನ್ನ ಸಾಮರ್ಥ್ಯ ಮತ್ತು ಪ್ರತಿಭೆಯನ್ನ ಗುರುತಿಸಿ ಅವಕಾಶ ನೀಡಿದರೆ ಸಾಮಾನ್ಯರಿಗೆ ಸವಾಲು ಹಾಕುವಂತಹ ಪ್ರತಿಭೆ ಅಂಗವಿಕಲರಲ್ಲಿ ಇರುತ್ತದೆಂಬುದಕ್ಕೆ ಅನೇಕ ನಿದರ್ಶನಗಳಿವೆ. ಅದೇ ರೀತಿ ಈ ಅಬ್ಬೂರು ಶ್ರೀನಿವಾಸ್ ಬಾಲ್ಯದಿಂದಲೇ ಪೋಲಿಯೋ ಪೀಡಿತರಾಗಿದ್ದರೂ ಪಿ.ಯು.ಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಸರ್ಕಾರಿ ಕೆಲಸಕ್ಕಾಗಿ ಕಾಯದೇ ಸಾಮಾನ್ಯರಂತೆ ಶ್ರೀನಿವಾಸ್ ಕೂಡ ಹಸು, ಮೇಕೆ, ಕುರಿಗಳಿಗೆ ಹುಲ್ಲು ತರುತ್ತಾರೆ, ಕೃಷಿ ಚಟುವಟಿಕೆ ನಡೆಸುತ್ತಾರೆ. ಶ್ರೀನಿವಾಸ್ ಅವರಲ್ಲಿರುವ ಆತ್ಮವಿಶ್ವಾಸ ಅಂಗವೈಕಲ್ಯವನ್ನೇ ಮೆಟ್ಟಿನಿಂತು ಉತ್ತಮ ಬದುಕು ಸಾಗಿಸಲು ಸಹಕಾರಿಯಾಗಿದೆ ಎಂಬುದು ಅಂಗವಿಕಲ ಸಂಘದ ಅಧ್ಯಕ್ಷ ಸಿದ್ದೇಗೌಡರ ಅಭಿಪ್ರಾಯವಾಗಿದೆ.