ಪ್ರತಿಮೆ ರಹಿತ ಪಾರ್ಕ್ ಗೆ ಮಾಯಾ ಮುಚ್ಚಳಿಕೆ
ಲಖನೌದಲ್ಲಿನ ಹಳೆಯದಾದ ಒಂದು ಸೆರೆಮನೆ ಇದೆ. ಸೆರೆಮನೆ ಕಟ್ಟಡವನ್ನು ಕೆಡವಿ ಅಲ್ಲಿ ಪರಿಸರ ಪಾರ್ಕ್ ಸೃಷ್ಟಿಸುವ ಉದ್ದೇಶ ಮಾಯಾವತಿ ಸರಕಾರಕ್ಕಿದೆ. ಆದರೆ, ಆ ಪಾರ್ಕಿನಲ್ಲಿ ಕೇವಲ ದಲಿತ ನಾಯಕರ ಪ್ರತಿಮೆಗಳು, ಕಾನ್ಸಿರಾಮ್ ಸ್ಥಳ್, ಅಂಬೇಡ್ಕರ್ ಸ್ಥಳ್, ಬಹುಜನ್ ಸಮಾಜ ಪಕ್ಷದ ಚುನಾವಣಾ ಚಿಹ್ನೆ ಆನೆಯ ವಿಗ್ರಹಗಳನ್ನು ಸ್ಥಾಪಿಸುವ ಮಾಯಾಲಹರಿಗೆ ನ್ಯಾಯಾಲಯ ತಣ್ಣೀರೆರೆಚಿದೆ.
ಉದ್ದೇಶಿತ ಇಕೊ ಪಾರ್ಕಿನಲ್ಲಿ ಕೇವಲ ದಲಿತರ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಅನುಮಾನಿಸಿ ಸೆರೆಮನೆ ಕೆಡುವುದರ ವಿರುದ್ಧವೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿತ್ತು. ಸೆರೆಮನೆ ಕೆಡಹುವುದಕ್ಕೆ ಇದ್ದ ತಡೆಯನ್ನು ತೆರವು ಮಾಡಿದ ಸರ್ವೋಚ್ಛ ನ್ಯಾಯಾಲಯ ಪಾರ್ಕ್ ನಿರ್ಮಾಣಕ್ಕೆನೋ ಹಸುರು ನಿಶಾನೆ ತೋರಿಸಿದೆ. ಆದರೆ, ಯಾರೊಬ್ಬರ ಪ್ರತಿಮೆಗಳನ್ನು ಪಾರ್ಕಿನಲ್ಲಿ ಸ್ಥಾಪಿಸುವುದಿಲ್ಲ ಎಂದು ಮಾಯಾವತಿ ಪರ ವಕೀಲರ ಹೇಳಿಕೆ ಬುಧವಾರ ಕೋರ್ಟಿನಲ್ಲಿ ದಾಖಲಾದ ನಂತರವೇ ನ್ಯಾಯಾಲಯ ಪರಿಸರ ಪಾರ್ಕ್ ನಿರ್ಮಾಣಕ್ಕೆ ಅವಕಾಶ ನೀಡಿತು.
ವಿವಾದಾಸ್ಪದ ಸೆರೆಮನೆ ಪ್ರದೇಶದ ವಿಸ್ತೀರ್ಣ 195 ಎಕರೆಗಳು. ಹಳೆಯ ಸೆರೆಮನೆ ಕೆಡವಿ ಆನಂತರ ನಗರದ ಹೊರವಲಯದಲ್ಲಿ ಬೇರೊಂದು ಸುಸಜ್ಜಿತ, ಸದೃಢ ಬಂದೀಖಾನೆ ಕಟ್ಟುವುದಾಗಿಯೂ ಮಾಯಾ ಸರಕಾರ ಒಪ್ಪಿಕೊಂಡಿದೆ.
(ಏಜನ್ಸೀಸ್)