ಮಲೆನಾಡಿನಲ್ಲಿ ಅಬ್ಬರಿಸುತ್ತಿರುವ ವರುಣ

ಜಲಾಶಯಗಳಿಗೆ ಒಳಹರಿವು ಹೆಚ್ಚಿದ್ದು, ನೀರಿನ ಮಟ್ಟ ಏರುತ್ತಿದೆ. ಕೊಡಗಿನಲ್ಲಿ ಜುಲೈ 8 ಮತ್ತು 9 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೂಡಿಗೆರೆ ತಾಲ್ಲೂಕು ಕುಂದೂರು ಎಸ್ಟೇಟ್ ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದು, ಹಳ್ಳದಲ್ಲಿ ಶೀಲಾ (15) ಎಂಬಾಕೆ ಕೊಚ್ಚಿಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾವೇರಿನದಿ ನೀರು ಉಕ್ಕಿ ಹರಿಯುತ್ತಿದ್ದು, 2 ನೇ ಬಾರಿಗೆ ಭಾಗಮಂಡಲ ಬಹುತೇಕ ಜಲಾವೃತಗೊಂಡಿದೆ. ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದೆ. ನಿಟ್ಟೂರು ವ್ಯಾಪ್ತಿಯ ಗದ್ದೆಗಳು ನೀರಿನಿಂದ ಜಲಾವೃತಗೊಂಡಿವೆ. ಹಾರಂಗಿ ಜಲಾಶಯಕ್ಕೆ 3,653 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ 2,822,53 ಅಡಿಗೆ ಏರಿದೆ.
ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅಂಗಡಿ ಮುಂಗಟ್ಟು, ಮನೆಗಳಿಗೆ ನೀರು ಹೊಕ್ಕಿದೆ. ಉಳ್ಳಾಲದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಪೆರುವಾಯಿಯಲ್ಲಿ ಬಾಬು ನಾಯ್ಕ ಎಂಬುವವರ ಪತ್ನಿ ಶಿವಮ್ಮ ಸೋಮವಾರ ಮೃತಪಟ್ಟಿದ್ದಾರೆ. ಕೆಲವಡೆ ಮನೆಗಳು ಕುಸಿದಿವೆ. ಮನೆಗಳ ಚಾವಣೆಗಳು ಹಾರಿಹೋಗಿವೆ.
ಸತತ ಮಳೆಯಿಂದಾಗಿ ಒಂದೇ ದಿನದಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಐದು ಅಡಿ, ಭದ್ರಾ ಜಲಾಶಯಕ್ಕೆ ನಾಲ್ಕೂವರೆ ಅಡಿ ನೀರು ಬಂದಿದೆ. ಶರಾವತಿ, ಕುಮದ್ವತಿ, ಮಾಲತಿ, ದಂಡಾವತಿ ನದಿಗಳು ನೀರಿನ ಮಟ್ಟ ಮತ್ತಷ್ಟು ಏರಿದೆ. ಕಾರ್ಗಲ್ ಲಿಂಗನಮಕ್ಕಿ ಸುತ್ತಮುತ್ತ ನಿರಂತರ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತದಲ್ಲಿ ಶರಾವತಿ ನದಿಯ ವೈಭವ ಹೆಚ್ಚಿದೆ.
ಜಲಾನಯನ ಪ್ರದೇಶದಲ್ಲಿ ಮಳೆಯಾಗಿರುವುದರಿಂದ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications