ಆಗುಂಬೆಯಲ್ಲಿ 18 ಸೆಂ ಮೀ ಭಾರಿ ಮಳೆ
ಶಿವಮೊಗ್ಗ, ಜು. 3 : ಮುಂಗಾರುಮಳೆ ರಾಜ್ಯದ ಪಾಲಿಗೆ ಕೃಪೆ ತೋರುತ್ತಿದ್ದು, ಕರಾವಳಿ ಮತ್ತು ಸಮುದ್ರ ಪ್ರದೇಶಗಳಲ್ಲಿ ಉತ್ತಮ ಮಳೆ ಬೀಳತೊಡಗಿದೆ. ಗುರುವಾರ ಆಗುಂಬೆಯಲ್ಲಿ ಅತ್ಯಧಿಕ ಅಂದರೆ 18 ಸೆಂ ಮೀ ಮಳೆ ಸುರಿದಿದೆ.
ಹೊನ್ನಾವರ 17, ಕಾರವಾರ 14, ಗೇರುಸೊಪ್ಪ 11, ಬಜ್ಪೆ ಮತ್ತು ಧರ್ಮಸ್ಥಳ 9, ಅಂಕೋಲಾ 8, ಮೂಲ್ಕಿ, ಮಣಿ, ಪಣಂಬೂರು ಮತ್ತು ಶಿರಾಡಿಯಲ್ಲಿ 7 ಸೆಂ ಮೀ ಮಳೆ ಬಿದ್ದಿದೆ. ಭಾಗಮಂಡಲ, ಲಿಂಗನಮಕ್ಕಿ, ಲಕ್ಕವಳ್ಳಿಯಲ್ಲಿ 6 ಸೆಂ ಮೀ, ಸುಬ್ರಮಣ್ಯ, ಕೋಟಾ, ಶೃಂಗೇರಿಯಲ್ಲಿ 4 ಸೆಂ ಮೀ, ಜಗಲ್ ಬೆಟ್, ಹಳಿಯಾಳ, ಮಡಿಕೇರಿ, ವಿರಾಜ್ ಪೇಟೆ, ತಾಳಗುಪ್ಪ, ಹಂಚದಕಟ್ಟೆ, ಜಯಪುರದಲ್ಲಿ 3 ಸೆಂಮೀ, ಬನವಾಸಿ, ಯಲ್ಲಾಪುರ, ನಾಪೋಕ್ಲು, ತ್ಯಾಗರ್ತಿ, ಎನ್ ಆರ್ ಪುರ್, ಚಿಕ್ಕನಹಳ್ಳಿಯಲ್ಲಿ 2 ಸೆಂ ಮೀ, ಚಿಕ್ಕೋಡಿ, ಧಾರವಾಡ, ಶಿಗ್ಗಾಂವ್ ಮತ್ತು ಬಾಳೇಹೊನ್ನೂರಿನಲ್ಲಿ 1 ಸೆಂ ಮೀ ನಷ್ಟು ಸಾಧಾರಣ ಮಳೆಯಾಗಿದೆ.
ಶುಕ್ರವಾರ ಮತ್ತು ಶನಿವಾರ ಕರಾವಳಿ, ಘಾಟ್ ಪ್ರದೇಶಗಳು, ಸಮುದ್ರ ತೀರದ ಪ್ರದೇಶಗಳಲ್ಲಿ ಉತ್ತಮ ಹಾಗೂ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಕರಾವಳಿ ಮತ್ತು ಘಾಟ್ ಪ್ರದೇಶದ ರೈತರಿಗೆ ಅನುಕೂಲಕರ ಮಳೆ ಎನ್ನಲಾಗಿದೆ. ಉತ್ತರ ಕರ್ನಾಟದ ಕೆಲ ಭಾಗಗಳಲ್ಲಿ ಸಾಧಾರಣ ಮಳೆ ಬೀಳುವ ಸಂಭವವಿದೆ. ಸಮುದ್ರದ ತೀರದಲ್ಲಿ ಗಂಟೆಗೆ 45 ರಿಂದ 55 ಕಿಮೀ ವೇಗದಲ್ಲಿ ತಂಪಾದ ಗಾಳಿ ಬೀಸುತ್ತಿದ್ದು, ಮೀನುಗಾರರು ಭಾರಿ ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)