ಸಿದ್ದರಾಮಯ್ಯಗೆ ಮತಿಭ್ರಮಣೆಯಾಗಿದೆ : ರೆಡ್ಡಿ
ಇತ್ತೀಚೆಗೆ ಸಿದ್ದರಾಮಯ್ಯ ಅವರು ಬಳ್ಳಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೆಡ್ಡಿಗಳ ವಿರುದ್ಧ ತೀವ್ರ ಆಕ್ರೋಶಪಡಿಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಅಂತರದಲ್ಲಿ ಜಯಗಳಿಸಿದೆ. ಅದರಲ್ಲಿ ಸಾಕಷ್ಟು ಅಕ್ರಮ ನಡೆದಿರುವ ಆರೋಪವೂ ಕೇಳಬಂದಿದೆ. ಒಟ್ಟಿನಲ್ಲಿ ಬಳ್ಳಾರಿಯಲ್ಲಿ ನೈತಿಕವಾಗಿ ಕಾಂಗ್ರೆಸ್ ಗೆಲುವು ಸಾಧಿಸಿದಂತಾಗಿದೆ ಎಂಬ ಹೇಳಿಕೆ ಸಿದ್ದರಾಮಯ್ಯ ನೀಡಿದರು.
ಸಿದ್ದು ಹೇಳಿಕೆಗೆ ಕೆರಳಿರುವ ರೆಡ್ಡಿ, ಸಿದ್ದರಾಮಯ್ಯ ಅವರ ತಲೆ ಸರಿಯಿದೆಯೋ, ಇಲ್ಲವೋ ಎನ್ನುವುದನ್ನು ಮೊದಲು ಪರೀಕ್ಷೆ ಮಾಡಿಸಿಕೊಳ್ಳಲಿ. ಪ್ರತಿಪಕ್ಷದ ನಾಯಕನಾದರೆ, ಮುಖ್ಯಮಂತ್ರಿಯಾದಂತಲ್ಲ. ಬಳ್ಳಾರಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಅದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಒಂದೇ ಒಂದು ಮತದಿಂದ ಜಯ ಗಳಿಸಿದರೂ ಅದು ಅರ್ಹ ಗೆಲುವೆ. ಹೀಗಿದ್ದಾಗೆ ಸಿದ್ದರಾಮಯ್ಯ ಅಡುತ್ತಿರುವ ಮಾತಿನಿಂದ ಸಂಶಯ ಬರುತ್ತಿದ್ದು, ಆವರು ಕೂಡಲೇ ವೈದ್ಯರನ್ನು ಕಾಣಲಿ ಎಂದು ವ್ಯಂಗ್ಯವಾಡಿದ್ದಾರೆ.
ಚಾಮುಂಡೇಶ್ವರಿ ವಿಧಾನಸಭೆ ಮರುಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎದುರು ಕೇವಲ 251 ಮತಗಳಿಂದ ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿರುವುದನ್ನು ಮರೆಯಬಾರದು. ಗೆಲುವು ಗೆಲುವೆ. ಸೋಲನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಅನಗತ್ಯವಾಗಿ ಟೀಕೆ ಮಾಡುವುದನ್ನು ಕೈಬಿಡಲಿ ಎಂದು ಜನಾರ್ದನ ರೆಡ್ಡಿ ಸಲಹೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)