ಹೆಚ್ಚುವರಿ ಪಡಿತರ ಚೀಟಿ ಹಿಂದಿರುಗಿಸಲು ಗಡುವು
ಬೆಂಗಳೂರು, ಜು. 2 : ಒಂದೇ ಕುಟುಂಬದಲ್ಲಿ ಒಂದಕ್ಕಿಂತಲೂ ಹೆಚ್ಚು ಪಡಿತರ ಚೀಟಿ ಹೊಂದಿರುವ ಹಾಗೂ ಬಡತನ ರೇಖೆಯ ಮೇಲಿನ ಅಧಿಕ ಆದಾಯವಿದ್ದರೂ ಸುಳ್ಳು ದಾಖಲೆಗಳನ್ನು ನೀಡಿ ಬಡತನ ರೇಖೆಗಿಂತಲೂ ಕಡಿಮೆ ಆದಾಯವಿರುವವರಿಗೆ ನೀಡಲಾಗುವ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವವರು ಅವುಗಳನ್ನು ಸ್ವಯಂ ಪ್ರೇರಿತರಾಗಿ ತಮ್ಮ ವ್ಯಾಪ್ತಿಯ ತಹಸೀಲ್ದಾರರ ಕಚೇರಿಗೆ ಜುಲೈ 10 ರೊಳಗೆ ಹಿಂದಿರುಗಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್. ಕೆ. ರಾಜು ಅವರು ಸೂಚಿಸಿದ್ದಾರೆ.
ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಂತೆ ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ವಾರ್ಷಿಕ ಆದಾಯ 12,000 ರೂ ಹಾಗೂ ನಗರ ಅಥವಾ ಪಟ್ಟಣ ಪ್ರದೇಶದಲ್ಲಿ ಕುಟುಂಬದ ವಾರ್ಷಿಕ ಆದಾಯ 17,000 ರೂ ಗಳಿಗಿಂತಲೂ ಕಡಿಮೆ ಇರುವ ಕುಟುಂಬಗಳು ಮಾತ್ರ ಬಿ ಪಿ ಎಲ್ ಪಡಿತರ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲ್ಲೂಕುಗಳಲ್ಲಿ ಸುಳ್ಳು ಮಾಹಿತಿ ಒದಗಿಸಿ ಈಗಾಗಲೇ ಗಣಕೀಕೃತ ತಾತ್ಕಾಲಿಕ ಪಡಿತರ ಕೂಪನ್ ಹೊಂದಿರುವವರು ಹಾಗೂ ನೆಮ್ಮದಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಬಿ ಪಿ ಎಲ್ ಪಡಿತರ ಚೀಟಿಗಳನ್ನು ಪಡೆದಿರುವವರು ಸಂಬಂಧಿತ ವ್ಯಾಪ್ತಿಯ ತಹಸೀಲ್ದಾರರ ಕಚೇರಿಗೆ ಅವುಗಳನ್ನು ಜುಲೈ 10 ರೊಳಗೆ ಹಿಂದಿರುಗಿಸದಿದ್ದಲ್ಲಿ ಅಂತಹವರ ವಿರುದ್ಧ 1977 ರ ಕರ್ನಾಟಕ ಅನಧಿಕೃತ ಪಡಿತರ ಚೀಟಿ ಹೊಂದುವುದನ್ನು ತಡೆಗಟ್ಟುವ ಕಾಯಿದೆ ಹಾಗೂ 1955 ರ ಅಗತ್ಯ ವಸ್ತುಗಳ ಕಾಯಿದೆ ಉಲ್ಲಂಘನೆ ಕುರಿತಂತೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗುವುದು ಎಂದು ಜಿಲ್ಲಾಧಿಕಾರಿ ರಾಜು ಅವರು ಎಚ್ಚರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications