ತಾಲಿಬಾನ್ ಉಗ್ರರಿಂದ ಭಾರತಕ್ಕೆ ಅಪಾಯ : ಎಂಟನಿ
ನವದೆಹಲಿ, ಜೂ. 25 : ತಾಲಿಬಾನ್ ಉಗ್ರರಿಂದ ಭಾರತಕ್ಕೆ ಅಷ್ಟೆ ಅಲ್ಲ ಇಡೀ ಜಗತ್ತಿಗೆ ಅಪಾಯ ಕಾದಿದೆ ಎಂದು ಕೇಂದ್ರ ರಕ್ಷಣಾ ಸಚಿವ ಎ ಕೆ ಎಂಟನಿ ಕಳವಳ ವ್ಯಕ್ತಪಡಿಸಿದರು. ಪಾಕಿಸ್ತಾನದ ಬೀಡುಬಿಟ್ಟಿರುವ ತಾಲಿಬಾನ್ ಗಳು ಭಾರತದ ಶಾಂತಿ ಸುವ್ಯವಸ್ಥೆ ಕದಡಲು ಕಾದುಕುಳಿತಿದ್ದಾರೆ ಎಂದು ಅವರು ಆರೋಪಿಸಿದರು.
ನಗರದಲ್ಲಿ ಎರಡು ದಿನಗಳ ಕಮಾಂಡರ್ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ತಾಲಿಬಾನ್ ಉಗ್ರರ ಅಟ್ಟಹಾಸದಿಂದ ಪಾಕಿಸ್ತಾನದ ಸ್ಥಿತಿ ಇಂದು ಯಾವ ಮಟ್ಟಕ್ಕೆ ಬಂದಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ ಎಂದರು. ತಾಲಿಬಾನ್ ಉಗ್ರರು ಸೇರಿದಂತೆ ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗಿ ಪಾಕಿಸ್ತಾನದ ನೆಲೆಸಿರುವ ಉಗ್ರರು ಹಾಗೂ ಅವರಿಗೆ ಬೆಂಬಲ ನೀಡಿದ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಪಾಕಿಸ್ತಾನಕ್ಕೆ ನಾವು ಹೇಳುತ್ತಲೇ ಬಂದಿದ್ದೇವೆ. ಆದರೆ, ಪಾಕಿಸ್ತಾನ ಭಾರತಕ್ಕೆ ಬೇಕಿರುವ ಮೊಸ್ಟ್ ವಾಂಟೆಡ್ ಉಗ್ರರ ವಿರುದ್ದ ಕ್ರಮಕೈಗೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಭಾರತ ಗಡಿಯೊಳಗೆ ಭಾರಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಗಡಿ ಭೇದಿಸಿ ಉಗ್ರರು ಭಾರತದೊಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಎಂಟನಿ ಸ್ಪಷ್ಟಪಡಿಸಿದರು.
(ಏಜನ್ಸೀಸ್)